


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಶಿಕ್ಷಕ ವೃತ್ತಿ ಜೀವನ ಪ್ರಾರಂಭವಾದಾಗಿನಿಂದಲೂ ಮಕ್ಕಳಿಂದಲೇ ಅನ್ನ ದೊರೆಯುತ್ತಿರುವುದು. ಹಾಗಾಗಿ ಅವರೇ ನನ್ನ ಪಾಲಿ ದೇವರು. ಸಹೋದ್ಯೋಗಿಗಳ ಸಹಕಾರದೊಂದಿಗೆ ಶಾಲಾಭಿವೃದ್ಧಿ ಮಂಡಳಿಯ ಬೆಂಬಲದೊಂದಿಗೆ ಪೋಷಕರ ಮತ್ತು ಊರನಾಗರೀಕರ ಸಹಕಾರದೊಂದಿಗೆ ವೃತ್ತಿ ಜೀವನ ನಿರಾತಂಕವಾಗಿ ನಿವೃತ್ತಿಯತ್ತ ಬಂದು ನಿಂತಿದೆ. ಕ್ಷಣಗಳು ಬಾವುಕವಾದರೂ ಭಾವನೆಗಳು ಮರೆಯಲಾರದಂತಹವು ಎಂದು ಸೇವಾನಿವೃತ್ತಿಯಾದ ಮಾದರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ರವೀಂದ್ರನಗರ ಶಾಲೆಗೆ ವರ್ಗಾವಣೆಗೊಂಡು ನಿವೃತ್ತಿಯ ಬೀಳ್ಕೊಡುಗೆ ಸ್ವೀಕರಿಸಿದ ಮುಖ್ಯ ಶಿಕ್ಷಕ ಜಗದೀಶ ನಾಯ್ಕರ್ ಹೇಳಿದರು.

ಅವರು ಪಟ್ಟಣದ ಮಾದರಿ ಶಾಲೆಯ ಸಭಾಭವನದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಸಂದರ್ಭದಲ್ಲಿ ಗೌರವ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು.

ಮುಖ್ಯ ಶಿಕ್ಷಕ ಜಗದೀಶ ನಾಯ್ಕರ್ ಅವರ ಜೀವನ ಪಯಣ ಮತ್ತು ವೃತ್ತಿ ಬದ್ಧತೆಯ ಕುರಿತು ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರಶಿಕ್ಷಣಧಿಕಾರಿಗಳ ಕಚೇರಿ ಅಧಿಕಾರಿ ಷಣ್ಮುಖ ಹೆಗಡೆ, ಶಿಕ್ಷಕ ಸಂಜೀವ ಹೊಸ್ಕೇರಿ, ಮುಖ್ಯ ಶಿಕ್ಷಕಿ ಅನಸೂಯ , ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಗಾಯತ್ರಿ ಬೋಳಗುಡ್ಡೆ ಉಪಸ್ಥಿತರಿದ್ದು ಶುಭಕೋರಿದರು.

ನಿವೃತ್ತಿಯಾಗುತ್ತಿರುವ ಮುಖ್ಯ ಶಿಕ್ಷಕ ಜಗದೀಶ ನಾಯ್ಕರ ಹಾಗೂ ಅವರ ಪತ್ನಿ ಗೀತಾ ನಾಯ್ಕರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಅವರೊಂದಿಗಿನ ಒಡನಾಟವನ್ನು, ಶಾಲೆಯಲ್ಲಿನ ಅವರ ದಿನಚರಿ ಕುರಿತು ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಶೋಭಾ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಜಿ.ಕೆ ಭಟ್ಟ ವಂದಿಸಿದರೆ. ಶಿಕ್ಷಕಿ ಜ್ಯೋತಿ ಹೆಗಡೆ ಸ್ವಾಗತಿಸಿ ನಿರ್ವಹಿಸಿದರು. ಕೊನೆಯಲ್ಲಿ ಜಾತ್ರಾ ಸಮಯದ ಲೆಕ್ಕಪತ್ರವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ ಸಭೆಗೆ ಒಪ್ಪಿಸಿದರು. ದ್ಯಾಮಣ್ಣ ಭೋವಿವಡ್ಡರ, ರವಿ ನಾಯ್ಕ ಇನ್ನಿತರ ಪ್ರಮುಖರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.





