
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ: ತಾಲೂಕಿನ ಡಬ್ಗುಳಿಯ ಗುರುಗಣೇಶ ಭಟ್ಟ ಹಾಗೂ ತೇಲಂಗಾರದ ಸುಮಾ ಕಂಚಿಪಾಲ್ ಭಾನುವಾರ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಿತಾರ್ಥ ಮಾಡಿಕೊಂಡರು. ವಿಶೇಷವೆಂದರೆ ಸಪ್ತಪದಿ ತುಳಿಯುವ ಬಗ್ಗೆ ಕರಾರು ಪತ್ರವೊಂದನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕುವ ಮೂಲಕ ಹೊಸತನ ತೋರಿದರು.
‘ವಿವಾಹದ ನಂತರ ಪತ್ನಿಯ ಸಂಪೂರ್ಣ ಹೊಣೆ ತನ್ನದು’ ಎಂದು ವರನ ಜೊತೆ ಆತನ ಕುಟುಂಬದವರು ಘೋಷಿಸಿದರು. ‘ಈ ವಿವಾಹಕ್ಕಾಗಿ ವಧುದಕ್ಷಿಣೆ ಅಥವಾ ವರದಕ್ಷಿಣೆ ಸ್ವೀಕರಿಸುವುದಿಲ್ಲ’ ಎಂದು ಎರಡು ಕಡೆಯವರು ಪ್ರತಿಜ್ಞೆ ಮಾಡಿದರು. ಹಿಂದೂ ಸಂಪ್ರದಾಯ ಪ್ರಕಾರ ನಿಶ್ಚಿತಾರ್ಥವಾಗಿ ಒಂದು ವರ್ಷದ ಒಳಗೆ ಶಾಸ್ತ್ರೋಕ್ತವಾಗಿ ವಿವಾಹ ನಡೆಸುವ ಬಗ್ಗೆ ಕರಾರಿನಲ್ಲಿ ಉಲ್ಲೇಖಿಸಲಾಗಿದೆ. ವಧು-ವರ ಇಬ್ಬರು ಖಾಸಗಿ ಮಾಧ್ಯಮ ಸಂಸ್ಥೆಯೊಂದರ ಉದ್ಯೋಗಿಗಳಾಗಿದ್ದಾರೆ.
ನವೀನ ಯುಗದ ಭರಾಟೆಯಲ್ಲಿ ವೈವಾಹಿಕ ಸಂಬಂಧಗಳು, ದಾಂಪತ್ಯ ಜೀವನ, ಕುಟುಂಬದ ವ್ಯಾಖ್ಯಾನ, ಬದಲಾಗುತ್ತಿರುವ ದಿನಗಳಲ್ಲಿ ಸಂಸ್ಕಾರ ಸಂಪ್ರದಾಯಗಳೊಂದಿಗೆ ಇನ್ನೂ ಉಳಿದುಕೊಂಡು ಬರುತ್ತಿರುವ ಗಂಡು-ಹೆಣ್ಣಿನ ನಡುವೆ ಸರ್ವ ಶ್ರೇಷ್ಠ ಸಂಬಂಧ, ವಿವಾಹ ಬಂಧನ ವಿನೂತನ ದಿಕ್ಕಿನೆಡೆಗೆ ಸಾಗುತ್ತಿದೆ. ಒಟ್ಟಿನಲ್ಲಿ ಕಾಲ ಬದಲಾದರೂ ಪದ್ಧತಿ-ಪರಂಪರೆಗಳು ಬದಲಾದರೂ ಮದುವೆ ಎಂಬ ಮೂರಕ್ಷರದ ನಂಟು ಮಾಡ್ರನ್ ಯುಗದಲ್ಲೂ ಮಹತ್ವ ಪಡೆದುಕೊಂಡಿದೆ ಎಂಬುದು ಒಪ್ಪಿಕೊಳ್ಳಲೆಬೇಕಾದ ಸತ್ಯ.




