
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ರಾಜ್ಯದ ವಿವಿಧೆಡೆಗಳಲ್ಲಿ ಅನೇಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಕೆನರಾ ವೃತ್ತಕ್ಕೆ ಆಗಮಿಸಿದ ನಂತರ, ನನ್ನ ಅವಧಿಯಲ್ಲಿ ನಡೆದ ಕೆಲಸ ಕಾರ್ಯಗಳು ಅಸಾಮಾನ್ಯವಾದುದೇನಲ್ಲ. ಆದರೆ ಹುದ್ದೆಯ ಘನತೆಗೆ ತಕ್ಕಂತೆ, ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಅನೇಕ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಬೆಂಗಳೂರಿನ ಅರಣ್ಯ ಪಡೆಯ ಮುಖ್ಯಸ್ಥರೂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೂ ಆಗಿದ್ದ ಆರ್.ಕೆ.ಸಿಂಗ್ ಹೇಳಿದರು.

ಅವರು ಪಟ್ಟಣದ ಅರಣ್ಯ ಸಂಕೀರ್ಣದಲ್ಲಿ ಕೆನರಾ ವೃತ್ತದ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅವರ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆರ್.ಕೆ.ಸಿಂಗ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಸರ್ಕಾರದ ಎಲ್ಲ ಇಲಾಖೆಗಳಿಗಿಂತ ಮುಖ್ಯವಾಗಿರುವ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿರಂತರ ಕ್ರಿಯಾಶೀಲರಾಗಿಯೂ , ಪ್ರಾಮಾಣಿಕರಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರೊಂದಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವ್ಯರ್ಥವಾಗಿ ಕಾಲ ಹರಣ ಮಾಡದೇ, ಸಮಸ್ಯೆಗಳು ಎದುರಾದರೆ ಬುಡದಲ್ಲೇ ಅವುಗಳನ್ನು ಚಿವುಟಿ ಹಾಕಿ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ವಸಂತ ರೆಡ್ಡಿ ಮಾತನಾಡಿ ಇಂದು ವಯೋ ಸಹಜ ನಿವೃತ್ತಿ ಹೊಂದುತ್ತಿರುವ ನಮ್ಮ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ನೇರ, ದಿಟ್ಟ, ನಿಷ್ಠುರದ ಅಧಿಕಾರಿಗಳಾಗಿದ್ದರೂ ಜೀವನದ ತತ್ವ ಆದರ್ಶಗಳನ್ನು ಎಂದೂ ಬಿಡದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು. ಸೇವೆಯಿಂದ ನಿವೃತ್ತರಾಗುತ್ತಿರುವುದು ನಿಜವಾದರೂ ಅವರು ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಿಂದೆ ನೀಡಿದ ಅನನ್ಯ ಸ್ವರೂಪದ ಮಾರ್ಗದರ್ಶನ ಮುಂದಿನ ದಿನಗಳಲ್ಲಿಯೂ ಬೇಕು ಎಂದು ಆಶಿಸಿದರು. ಅವರೇ ರೂಪಿಸಿದ “ಬೀಜ ಬಿತ್ತನೆ”ೆ ಒಂದು ಅಪರೂಪದ ಯೋಜನೆಯಾಗಿದ್ದು ಅದೀಗ ವ್ಯಾಪಕ ಜನಪ್ರಿಯತೆ ಪಡೆದು ಅರಣ್ಯ ಸಂರಕ್ಷಣೆಯ ದಿಸೆಯಲ್ಲಿ ಅತಿ ಪ್ರಾಮುಖ್ಯತೆ ಪಡೆದಿದೆ ಎಂದರು. ಸಿಂಗ್ ಅವರು ಅರಣ್ಯ ಇಲಾಖೆಯ ಕುರಿತು ಅತೀವ ಕಾಳಜಿಯನ್ನೂ ಮತ್ತು ಅರಣ್ಯ ಭೂಮಿಯ ಕುರಿತು ಅಭಿಮಾನವನ್ನೂ ಹೊಂದಿದ್ದ ಅಧಿಕಾರಿಯಾಗಿದ್ದರು ಎಂದು ಸ್ಮರಿಸಿದರು.

ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಜಿ.ಆರ್(ಶಿರಸಿ) , ಪ್ರಶಾಂತಕುಮಾರ್(ಕಾರವಾರ), ರವಿಶಂಕರ್(ಹೊನ್ನಾವರ), ಬಾಲಚಂದ್ರ(ಹಳಿಯಾಳ), ಅಜೀಜ್ ಶೇಟ್(ಶಿರಸಿ), ಮಂಜುನಾಥ ನಾವಿ-ಸಾಮಾಜಿಕ ಅರಣ್ಯ(ಕಾರವಾರ), ಡಿ.ಜಿ ಬೋಡೆ-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಜಿ.ವಿ ನಾಯ್ಕ-ವಲಯ ಅರಣ್ಯಾಧಿಕಾರಿ, ಗುರುಪ್ರಸಾದ- ಉಪವಲಯ ಅರಣ್ಯಾಧಿಕಾರಿ, ಸಿಬ್ಬಂದಿಗಳ ಪರವಾಗಿ ಪರಶು ಮೋತಿ ಮಾತನಾಡಿದರು.

ಗಸ್ತು ಅರಣ್ಯ ಪಾಲಕ ಶಹನವಾಜ್ ಮುಲ್ತಾನಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಸಿಬ್ಬಂದ್ದಿಗಳಾದ ಶ್ರೀಶೈಲ ಮತ್ತು ಸುನಿತಾ ನಿರ್ವಹಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಎಚ್.ಎ ವಂದಿಸಿದರು.


ಉತ್ತಮ ವಿದ್ಯಾಸಬ್ಯಾಸ ಉತ್ತಮ ಸಂಸ್ಕಾರಕ್ಕಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರತಿ ಮನೆಯ ವಿದ್ಯಾ ಸಂಸ್ಥೆ ವೈಟಿಎಸ್ಎಸ್ ಗೆ ಸೇರಿಸಿ




