
ಯಲ್ಲಾಪುರ : ತಾಲೂಕಿನ ಹುಟಕಮನೆ ಗ್ರಾಮದ ಸರ್ವೆ ನಂ 61/6 ಹಾಗೂ ಲಗ್ತ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಎತ್ತರದ ಪ್ರಾಕೃತಿಕವಾಗಿರುವ ಗುಡ್ಡವನ್ನು ಜೆಸಿಬಿ ಯಂತ್ರ ಬಳಸಿ ಸಮತಟ್ಟು ಮಾಡುವ ಕಾನೂನುಬಾಹಿರ ಕೆಲಸ ಹಲವು ದಿನಗಳಿಂದ ನಡೆಯುತ್ತಿದೆ.

ಈ ಕುರಿತು ಕೆಲವು ಪ್ರಜ್ಞಾವಂತ ನಾಗರೀಕರು ಅರಣ್ಯ ನಾಶದೊಂದಿಗೆ ಪ್ರಾಕೃತಿಕ ವೈಪರೀತ್ಯಕ್ಕೆ ಕಾರಣವಾಗುವ ರೀತಿಯಲ್ಲಿ ಗುಡ್ಡ ನೆಲಸಮ ಮಾಡುವುದನ್ನು ತಡೆಯುವಂತೆ ಯಲ್ಲಾಪುರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಉತ್ತರಕನ್ನಡ ಜಿಲ್ಲೆ ಭೂಕುಸಿತಕ್ಕೆ ಸಾಕ್ಷಿಯಾಗುತ್ತಿದ್ದು ಸರ್ಕಾರ ಇಂತಹ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ನಡುವೆಯೇ ಹುಟುಕಮನೆ ಗ್ರಾಮದ ಸರ್ವೆ ನಂ. 61/6 ಹಾಗೂ ಲಗ್ತ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ರಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಬೃಹತ್ ಗುಡ್ಡವನ್ನೆ ಮಾಯ ಮಾಡಿದ್ದಾರೆ.

ಪ್ರತಿನಿತ್ಯ ಅಗೆದು ಬೆಲೆ ಬಾಳುವ ಮರಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಬುಡ ಸಹಿತ ಕಿತ್ತು ಹೊಂಡಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಲಾಗಿದೆ ಮತ್ತು ಅಂದಾಜು 5೦೦೦ ಲಾರಿ ಲೋಡಾಗುವಷ್ಟು ಮಣ್ಣನ್ನು ಬೇರೆಡೆಗೆ ಸ್ಥಳಾಂತರಿಸಿದ್ದು ಮುಂಬರುವ ಮಳೆಗಾಲದಲ್ಲಿ ಭೂಕುಸಿತ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಸಂಬಂಧಿಸಿದ ಇಲಾಖೆ , ಅಧಿಕಾರಿಗಳು, ತಜ್ಞರ ತಂಡದೊಂದಿಗೆ ಬೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಅರಣ್ಯವನ್ನು ರಕ್ಷಿಸಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಳಗಿಮನೆ ನಿವಾಸಿ ಮಂಜುನಾಥ ಹೆಗಡೆ, ಪರಿಸರ ಪ್ರೇಮಿ ನೂತನನಗರ ಶಂಶುದ್ದೀನ್ ಮಾರ್ಕರ್, ಪ್ರೇಮಾನಂದ ನಾಯ್ಕ, ಎ.ಆರ್ ಶೇಖ ಮನವಿ ಸಲ್ಲಿಸಿದ್ದು ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಗ್ರೇಡ್-2 ತಹಸೀಲ್ದಾರ ಸಿ.ಜಿ ನಾಯ್ಕ ಮನವಿ ಸ್ವೀಕರಿಸಿದ್ದಾರೆ.