

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ರಾಜ್ಯದಲ್ಲೇ ವಿಶಿಷ್ಟ ಯುಗಾದಿ ಆಚರಣೆಗೆ ಹೆಸರಾದ ಯಲ್ಲಾಪುರದ ಯುಗಾದಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ತನ್ನಿಮಿತ್ತ ಪಟ್ಟಣದಲ್ಲಿ ಯುಗಾದಿ ಉತ್ಸವದ “ಜಾಗೃತಿ ಬೈಕ್ ರ್ಯಾಲಿ” ಹಮ್ಮಿಕೊಳ್ಳಲಾಗಿತ್ತು.


ಪಟ್ಟಣದ ಕಾಳಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೈಕ್ ರ್ಯಾಲಿಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಮಾಜಿ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಸದಸ್ಯ ಸೋಮೇಶ್ವರ ನಾಯ್ಕ, ಕಾಳಮ್ಮ ದೇವಿ ದೇವಸ್ಥಾನದ ಪ್ರಮುಖ ಉದಯ್ ನಾಯ್ಕ, ಪ್ರದೀಪ ಯಲ್ಲಾಪುರಕರ, ಗಜಾನನ ನಾಯ್ಕ ತಳ್ಳಿಗೇರೆ,ನಯನ್ ಇಂಗಳೆ, ಶ್ರೀನಿವಾಸ ಗಾಂವ್ಕರ, ರಜತ್ ಬದ್ದಿ, ರವಿ ದೇವಾಡಿಗ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಸಂಜೆ ವೇಳೆಗೆ ಚಾಲನೆಯಾದ ಬೈಕ್ ರ್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಸಮಾಪ್ತಿಗೊಂಡಿತು.

ಪುಟಾಣಿ ಮಕ್ಕಳೂ ಸಹ ತಮ್ಮ ಸೈಕಲ್ಗೆ ಕೇಸರಿ ಧ್ವಜ ಕಟ್ಟಿಕೊಂಡು ರ್ಯಾಲಿಯ ಮುಂಭಾಗದಲ್ಲಿ ಸಾಗಿದ್ದು ಆಕರ್ಷಣೀಯವಾಗಿತ್ತು. ರ್ಯಾಲಿಯಲ್ಲಿ ಯಲ್ಲಾಪುರ ಗ್ರಾಮದೇವಿಯ ಭಾವಚಿತ್ರ, ಶಿವಾಜಿಯ ಮೂರ್ತಿ ಹಿಡಿದು ಸಾಗಿದ್ದು ವಿಶೇಷವಾಗಿತ್ತು.

ನೂರಾರು ಸಂಖ್ಯೆಯಲ್ಲಿ ಬೈಕುಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಕೇಸರಿ ಪತಾಕೆ, ಕೇಸರಿ ಶಲ್ಯ ಧರಿಸಿದ ಯುವಕ ಯುವತಿಯರು ಹಿಂದುತ್ವ, ಭಾರತ ಮಾತೆ, ಶ್ರೀರಾಮ, ಶಿವಾಜಿ ನಾಮಕ್ಕೆ ಜಯಘೋಷ ಹಾಕುತ್ತಾ ಸಾಗಿದರು.

ಒಟ್ಟಿನಲ್ಲಿ ಕೇಸರಿಮಯ ರಂಗಿನಲ್ಲಿ ಹೊಸ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಯಲ್ಲಾಪುರ ಸಜ್ಜಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.





