
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಮಹಿಳೆ ಸ್ವಾವಲಂಬಿಯಾಗಿ ಜೀವನ ನಡೆಸಲು ಸಂಘಟಿತವಾದ ಪ್ರಯತ್ನ ಅಗತ್ಯ. ಉತ್ತಮ ತರಬೇತಿಯು ನಮ್ಮೊಳಗಿನ ಕೌಶಲ್ಯವನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಮಹತ್ವವಾದ ಕೊಡುಗೆ ನೀಡಬಲ್ಲದು. ಕೆಲಸದಲ್ಲಿನ ಶ್ರದ್ದೆ ಉತ್ತಮ ಪ್ರತಿಫಲ ನೀಡಬಲ್ಲದು. ಚಲನಶೀಲವಾದ ಬದುಕಿಗೆ ಆಸಕ್ತಿಯ ಕೆಲಸ ನೆಮ್ಮದಿಯನ್ನೂ ನೀಡಬಲ್ಲದು ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.

ಅವರು ವಜ್ರಳ್ಳಿಯಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ ಗ್ರಾ.ಪಂ ವಜ್ರಳ್ಳಿ ಯ ಆಶ್ರಯದಲ್ಲಿ ಗ್ರಾ.ಪಂ ಮಟ್ಟದ ಒಕ್ಕೂಟ, ವಾರ್ಡ ಮಟ್ಟದ ಒಕ್ಕೂಟಕ್ಕೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ವ್ಯಾಪಾರಾಭಿವೃದ್ದಿ ಕುರಿತು ಕಾರ್ಯಾಗಾರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಪ್ರಸಾದ್ ಮಾತನಾಡಿ , ಇಂದು ಮಾನವ ಸಂಪನ್ಮೂಲಾಭಿವೃದ್ಧಿ ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಬಲ್ಲದು. ಸುಪ್ತವಾದ ಕೌಶಲ್ಯಗಳು ಬೆಳಕಿಗೆ ಬಂದು ಪರಿಣಾಮಕಾರಿಯಾದ ಅನುಷ್ಠಾನಗೊಳ್ಳಲು ತರಬೇತಿಗಳು ಅವಶ್ಯ . ಇಂದು ಮಹಿಳೆಯರಿಗೆ ಅವಕಾಶದ ಬಾಗಿಲು ತೆರೆದಿದೆ. ನಾವು ತೊಡಗಿಸುವಿಕೆ ನಮ್ಮ ಇರುವಿಕೆಯನ್ನೂ ದಾಖಲಿಸುತ್ತದೆ ಎಂದರು.
ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕಿ ಲೂಸಿ ಯವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶಿವರಾಮ, ಆನಂದ್ , ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಜೀವಿನಿ ಸಿಬ್ಬಂದಿಗಳು, ಭಾಗ್ಯಶ್ರೀ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು ವಾರ್ಡ ಒಕ್ಕೂಟದ ಸದಸ್ಯರು, ಯಲ್ಲಾಪುರ ತಾಲೂಕಿನ ೫ ಮಾದರಿ ಗ್ರಾ.ಪಂ ಮಟ್ಟದ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿ,ಸಿಬ್ಬಂದಿಗಳು ತಾಲೂಕಾ ಅಭಿಯಾನ ನಿರ್ವಹಣಾ ಘಟಕ ತಾ.ಪಂ ಯಲ್ಲಾಪುರದ ಸಿಬ್ಬಂದಿಗಳು ಭಾಗವಹಿಸಿದ್ದರು.
ತರಬೇತಿ ಕಾರ್ಯಾಗಾರ ಸಂಯೋಜಕ ರಾಜಾರಾಮ ವೈದ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಸ್ತಕ ಬರಹಗಾರ್ತಿ ಷರೀಫಾ ಬಿ ಮುಲ್ಲಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.





Prathidvani Yellapura