
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ವಿಶ್ವ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರುತ್ತಿದ್ದೇವೆ ಎಂಬುದು ಸಂತಸ ಪಡುವ ವಿಚಾರವಲ್ಲ. ಹಾಗೆಂದು ಸದ್ಯದ ಸ್ಥಿತಿಯಲ್ಲಿ ದುಃಖ ಪಡುವ ವಿಚಾರವೂ ಅಲ್ಲ. ಆದರೆ ಭವಿಷ್ಯದಲ್ಲಿ ದೇಶಕ್ಕೆ ಹೊರೆಯಾಗುವ ಎಲ್ಲ ¯ಕ್ಷಣಗಳೂ ಗೋಚರಿಸುತ್ತಿವೆ. ಚೀನಾವನ್ನು ಹಿಂದಿಕ್ಕಿ ಭಾರತ ಮುನ್ನುಗ್ಗುತ್ತಿದೆ. ಮಾನವ ಸಂಪನ್ಮೂಲ ಹೆಚ್ಚಿತೆಂಬ ಸಂತಸ ಪಡುವ ವಿಚಾರವೂ ಹೌದಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ದೇಶ ಪ್ರಗತಿಗೆ ಸಾಧಕವಾಗಬಲ್ಲ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ. ಅಭಿವೃದ್ಧಿ ಮತ್ತು ಆರ್ಥಿಕತೆಯ ಸರಿಸಮ ರೇಖೆಗಳು ಸಮತೋಲನ ಕಾಯ್ದುಕೊಳ್ಳಬೇಕಿದ್ದರೆ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಬೀಳಲೇಬೇಕಿದೆ. ಆ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಕಾಯೋನ್ಮುಖವಾಗಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಪಟ್ಟಣದ ಅಡಿಕೆ ಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಉತ್ತರಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಗ್ರೀನ್ಕೇರ್ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೇಳಗಿ ಉದ್ಘಾಟಿಸಿ ಮಾತನಾಡಿದರು.

ಕೆಲವು ಮೂಡನಂಬಿಕೆಗಳು ಜನಸಂಖ್ಯಾ ಹೆಚ್ಛಳಕ್ಕೆ ಕಾರಣವಾಗುತ್ತಿದ್ದು ಕಡಿವಾಣ ಬೀಳದಿದ್ದಲ್ಲಿ ಮತ್ತೊಮ್ಮೆ ಭಾರತದಲ್ಲಿ ಹಾಹಾಕಾರಕ್ಕೆ ಕಾರಣವಾಗಲಿದೆ. ಪ್ರಸ್ತುತ ಸಮಾಜದಲ್ಲಿ ಹೆಣ್ಣು ಗಂಡೆಂಬ ಬೇಧಕ್ಕೆ ಆಸ್ಪದವಿಲ್ಲವಾಗಿದೆ. ಹೆಣ್ಣು ಗಂಡಿನಷ್ಟೇ ಸಮರ್ಥಳು ಮತ್ತು ಸಬಲಳಾಗಿದ್ದಾಳೆ. ಹಾಗಾಗಿ ಗಂಡುಮಕ್ಕಳೇ ಬೇಕೆಂಬ ಮನಸ್ಥಿತಿ ಅಲ್ಪಮಟ್ಟಿಗೆ ಬದಲಾಗುತ್ತಾ ಬಂದಿದೆ. ನಾಗರೀಕರಿಗೆ ಈ ಕುರಿತು ಪ್ರಜ್ಞೆ ಮೂಡಿದರೆ ಗಂಡಾಗಲೀ ಹೆಣ್ಣಾಗಲೀ ಕುಟುಂಬ ಪುಟ್ಟದಾಗಿರಲಿ ಎಂಬ ಮನಸ್ಥಿತಿಗೆ ಬಂದು ಜನಸಂಖ್ಯೆ ಏರಿಕೆಗೆ ಕಡಿವಾಣ ಬೀಳಲಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯೆ ಡಾ.ಸೌಮ್ಯಾ ದೀಪಕ್ ಭಟ್ಟ ವಿಶ್ವ ಜನಸಂಖ್ಯೆಯ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ , ಗ್ರೀನ್ ಕೇರ್ ಸಂಸ್ಥೆಯ ಜಿತೇಂದ್ರಕುಮಾರ್ ತೋನ್ಸೆ ಕಾರ್ಯಕ್ರಮದ ಕುರಿತು ಮಾತನಾಡಿದರು.

ತಾ.ಪಂ ಮುಖ್ಯಾಧಿಕಾರಿ ಜಗದೀಶ ಕಮ್ಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಕ್ಯಾಪ್ಟನ್ ಡಾ.ರಮೇಶ್ ರಾವ್ ವೇದಿಕೆಯಲ್ಲಿದ್ದರು.
ಶಿಲ್ಪಾ ಹೆಗಡೆ ಪ್ರಾರ್ಥಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ ಭಟ್ಟ ಸ್ವಾಗತಿಸಿದರು. ಆರೋಗ್ಯ ಇಲಾಖೆಯ ಮಹೇಶ್ ತಾಳಿಕೋಟೆ ನಿರೂಪಿಸಿ ವಂದಿಸಿದರು.


Prathidvani Yellapura