
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಬಿಜೆಪಿ ಸಂವಿಧಾನ ಬದಲಾಯಿಸಲು ಹೊರಟಿದೆ ಎಂಬ ಸುಳ್ಳನ್ನೆ ಅಸ್ತ್ರವಾಗಿಸಿಕೊಂಡು ಅಪಪ್ರಚಾರದಲ್ಲಿ ತೊಡಗಿ ಜನರ ದಿಕ್ಕು ತಪ್ಪಿಸಿ ಚುನಾವಣೆಯಲ್ಲಿ ಗೆದ್ದು ಪಟ್ಟಕ್ಕೆ ಬಂದ ನಂತರ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿರುವುದು ಹುನ್ನಾರ ನಡೆಸುತ್ತಿರುವುದು ಕಾಂಗ್ರೆಸಿಗರೇ.

ಅದರಲ್ಲೂ ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿರುವ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ ಮಾದ್ಯಮದ ಸಂದರ್ಶನವೊಂದರಲ್ಲಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕುರಿತು ಮಾತನಾಡುವಾಗ ಸಂವಿಧಾನ ಬದಲಿಸುವ ಮಾತನಾಡಿರುವುದನ್ನು ಖಂಡಿಸುತ್ತೇವೆಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಹೇಳಿದರು.

ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಸಂವಿಧಾನ ಬದಲಿಸುವ ಕುರಿತು ಮಾತನಾಡಿರುವುದನ್ನು ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟಿಸುವ ಸ್ಥಳದಲ್ಲಿ ಮಾತನಾಡಿದರು.

ದಲಿತರ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಜೀವಿತಾವಧಿಯಲ್ಲೂ ಅವಮಾನಿಸುತ್ತಾ ಬಂದಿದ್ದು ಈಗಲೂ ಅವರು ರಚಿಸಿದ ಸಂವಿಧಾನವನ್ನು ಬದಲಿಸುವ ಮಾತನಾಡಿರುವ ಡಿ.ಕೆ.ಶಿ ನಡೆ ಅಕ್ಷಮ್ಯ ಎಂದು ಪ.ಪಂ ಸದಸ್ಯೆ ಶಾಮಿಲಿ ಪಾಟಣಕರ ಹೇಳಿದರು.

ಕಾಂಗ್ರೆಸ್ ಪಕ್ಷದ ಷಡ್ಯಂತರದ ಪ್ರಮುಖ ಭಾಗವೇ ಸಂವಿಧಾನ ಬದಲಿಸುವ ಹುನ್ನಾರ. ಇಂತಹ ಮಾತುಗಳನ್ನು ಮಾಧ್ಯಮಗಳೆದುರು ಘಂಟಾಗೋಷವಾಗಿ ಹೇಳಿದ ಡಿ.ಕೆ ಶಿವಕುಮಾರ ಹೇಳಿಕೆಯನ್ನು ಕಠಿಣ ಶಬ್ಧಗಳಿಂದ ಖಂಡಿಸುತ್ತೇವೆಂದು ರಾಜ್ಯ ವಕ್ತಾರ ಹರಿಪ್ರಕಾಶ ಕೋಣೇಮನೆ ಹೇಳಿದರು.

ಈ ಸಂದರ್ಭದಲ್ಲಿ ಡಿಕೆಶಿ ಭಾವಚಿತ್ರವನ್ನು ಪೆಟ್ರೋಲ್ ಸುರಿದು ದಹಿಸಿ ಧಿಕ್ಕಾರ ಕೂಗಿದರು.ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ನಿಕಟಪೂರ್ವ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಸೋಮೇಶ್ವರ ನಾಯ್ಕ,ರಜತ್ ಬದ್ದಿ, ವಿಠ್ಠು ಶೆಳಕೆ, ಆದಿತ್ಯ ಗುಡಿಗಾರ, ಗಜಾನನ ನಾಯ್ಕ ತಳ್ಳೀಗೆರೆ, ರಾಮಚಂದ್ರ ಚಿಕ್ಯಾನಮನೆ, ರವಿ ದೇವಾಡಿಗ, ವಿನೋದ ತಳೇಕರ, ಪ್ರದೀಪ ಗುಡಿಗಾರ, ಗಣಪತಿ ಬೋಳಗುಡ್ಡೆ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.


