



ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ: ಸೋಮವಾರ ಸಂಜೆಯ ವೇಳೆ ಪಟ್ಟಣದ ಎಲ್ಲೆಡೆ ತಮಟೆಯದೆ ಸದ್ದು , ಬೇಡರ ವೇಷದಾರಿಗಳ ಕುಣಿತದ ಸೊಬಗು ಕಂಡುಬಂದಿತು.

ಹೋಳಿ ಹಬ್ಬದ ಸಂದರ್ಭದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಬೇಡರ ವೇಷದ ಕುಣಿತದ ಪ್ರದರ್ಶನ ಬಹುತೇಕ ಶಿರಸಿ ಭಾಗದಲ್ಲಿ ಹೆಸರುವಾಸಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಈ ಪದ್ದತಿ ನಿಧಾನವಾಗಿ ಯಲ್ಲಾಪುರದಲ್ಲೂ ಪ್ರಾರಂಭವಾಗಿ ಈ ವರ್ಷ ಪಟ್ಟಣದ ಎರಡು ಕಡೆಗಳಲ್ಲಿ ಅದ್ದೂರಿಯಾಗಿ ಬೇಡರ ವೇಷದ ಪ್ರದರ್ಶನ ಆಯೋಜನೆ ಮಾಡಿದ್ದಾರೆ.

ಪಟ್ಟಣದ ಅಂಬೇಡ್ಕರ್ ನಗರ, ರವೀಂದ್ರ ನಗರ ಹೋಳಿ ಉತ್ಸವ ಸಮಿತಿಗಳ ಎರಡು ಬೇಡರ ವೇಷದ ಕುಣಿತದ ತಂಡಗಳ ಆಯೋಜನೆಯಾಗಿತ್ತು.

ಅಂಬೇಡ್ಕರ್ ನಗರದ ಬೇಡರ ವೇಷದ ಪ್ರದರ್ಶನಕ್ಕೆ ಉದ್ಯಮಿ , ಸಾಮಾಜಿಕ ಕಾರ್ಯಕರ್ತ ನಂದನ ಬಾಳಗಿ, ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೇವಣಕರ ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂ.ಸೇ.ಸಮಿತಿಯ ಕಾರ್ಯದರ್ಶಿ ಸಂತೋಷ ಪಾಟಣಕರ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಬಾಹಿತ, ಕೃಷಿ ವಿಜ್ಞಾನಿ ಗುರುದತ್ತ ಹೆಗಡೆ , ಬೇಡರ ವೇಷ ಸಮಿತಿಯ ಅಧ್ಯಕ್ಷ ಅಕ್ಷಯ ರೇವಣಕರ ಹಾಗೂ ಸಮಿತಿಯ ಸದಸ್ಯರು ಜೊತೆಯಲ್ಲಿದ್ದರು.

ರವೀಂದ್ರ ನಗರ ಯುವಬಳಗದ ಸಾರಥ್ಯದಲ್ಲಿ ಪಟ್ಟಣದ ರವೀಂದ್ರನಗರದ ಬೇಡರ ವೇಷದ ಪ್ರದರ್ಶನವು ಸ್ಥಳೀಯ ಪ್ರಮುಖರಾದ ಮಾರುತಿ ಭೋವಿವಡ್ಡರ, ಶಿವರಾಜ ಭೋವಿವಡ್ಡರ, ಅನಿಲ ಜೋಗಳೇಕರ, ಪ.ಪಂ ಸದಸ್ಯರಾದ ಸೋಮೇಶ್ವರ ನಾಯ್ಕ, ಜ್ಯೋತಿ ನಾಯ್ಡು, ಹಾಗೂ ಇನ್ನಿತರ ಪ್ರಮುಖರ ಸಹಕಾರದಲ್ಲಿ ಅಂ.ಸೇ.ಸಮಿತಿ ಅಧ್ಯಕ್ಷ ಜಗನ್ನಾಥ ರೇವಣಕರ, ಕಾರ್ಯದರ್ಶಿ ಸಂತೋಷ ಪಾಟಣಕರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಪ್ರಾರಂಭಗೊಂಡಿತು.

ಅಂಬೇಡ್ಕರ್ ನಗರದ ಬೇಡರ ವೇಷಧಾರಿ ಸಾಗರ ರವಿ ಪಾವಸ್ಕರ ಹಾಗೂ ಜೊತೆಗಾರರಾದ ಭೀಮಪ್ಪ ಉಣಕಲ್, ರಾಕೇಶ ಕಲಾಲರೊಂದಿಗೆ ಹೆಜ್ಜೆ ಹಾಕಿ ರಂಜಿಸಿದರು.

ರವೀಂದ್ರ ನಗರದ ಬೇಡರ ವೇಷಧಾರಿ ಪ್ರಶಾಂತ ಜೋಗಳೇಕರ ತನ್ನ ಜೊತೆಗಾರರಾದ ದೀಪಕ ಮತ್ತು ಕೃಷ್ಣ ಪಾಲೇಕರರೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪೊಲೀಸ್ ವೃತ್ತದ ಬಳಿ ಸಮಾಗಮಗೊಂಡು ತಮ್ಮ ಭರ್ಜರಿ ಕುಣಿತದೊಂದಿಗೆ ಜನಮನ ಸೂರೆಗೊಂಡರು.

