


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ಹಿರಿಯ ಪತ್ರಕರ್ತ, ಅರ್ಥಧಾರಿ, ಅಂಕಣಕಾರ ಅನಂತ ವೈದ್ಯ ಅವರಿಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನುಡಿನಮನ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ ಮಾತನಾಡಿ, ಅನಂತ ವೈದ್ಯರ ಮೇರು ವ್ಯಕ್ತಿತ್ವ ಆದರ್ಶಪ್ರಾಯವಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ವೈದ್ಯ, ಪತ್ರಕರ್ತರಾಗಿ, ಸಾಹಿತಿಗಳಾಗಿ, ಉಪನ್ಯಾಸಕರಾಗಿ ವಿವಿಧ ನೆಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯ ವ್ಯಕ್ತಿತ್ವ ಹೊಂದಿದ್ದರು ಎಂದರು.
ಸಾಹಿತಿ ಸುಬ್ರಾಯ ಬಿದ್ರೆಮನೆ ಮಾತನಾಡಿ, ಪೌರಾಣಿಕ ಬರಹ, ಆಧ್ಯಾತ್ಮಿಕ ಚಿಂತನೆ, ಯಕ್ಷಗಾನದ ಬಗೆಗಿನ ಆಳವಾದ ಅಧ್ಯಯನ, ಬರವಣಿಗೆ, ಮಾತುಗಾರಿಕೆಯ ಮೂಲಕ ಪರಿಚಿತರಾಗಿದ್ದರು. ಸಾಹಿತ್ಯ, ಅಕ್ಷರ ಸೇವೆಯಲ್ಲಿ ವೈದ್ಯರದು ಬಹುಮುಖಿ ಸಾಧನೆ ಎಂದರು.
ಸಂಘದ ಕಾರ್ಯದರ್ಶಿ ಶ್ರೀಧರ ಅಣಲಗಾರ ಮಾತನಾಡಿ, ಹಿರಿಯರಾಗಿಯೂ ಕಿರಿಯರೊಂದಿಗೆ ಒಡನಾಡಿಗಳಾಗಿ ಸದಾ ಕಲಿಕೆಯ ತುಡಿತ, ಹೊಸ ಬಗೆಯ ಆಲೋಚನೆಯ ಕ್ರಮದಿಂದ ವೈದ್ಯರು ಸ್ಮರಣೀಯರಾಗಿದ್ದಾರೆ ಎಂದರು.
ಜಿಲ್ಲಾ ಸಮಿತಿ ಸದಸ್ಯೆ ಪ್ರಭಾವತಿ ಗೋವಿ ಮಾತನಾಡಿ, ವೈದ್ಯರಂತಹ ಹಿರಿಯರ ಸಾಧನೆಯ ದಾಖಲೀಕರಣ ಆಗಬೇಕೆಂದರು.
ಸದಸ್ಯ ಜಯರಾಜ ಗೋವಿ ಮಾತನಾಡಿ, ವೈದ್ಯರ ವ್ಯಕ್ತಿತ್ವ ಅನುಕರಣೀಯ ಎಂದರು.ಪತ್ರಕರ್ತ ಕೇಬಲ್ ನಾಗೇಶ ಮಾತನಾಡಿ, ವೈದ್ಯರ ನಿಧನದಿಂದ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ ಎಂದರು.ಸದಸ್ಯ ವಿಜಯಕುಮಾರ ನಾಯ್ಕ ಇದ್ದರು.






Prathidvani Yellapura