
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ತಮ್ಮ ವ್ಯಾಪಾರದಲ್ಲಿ ಗಳಿಸಿದ ಹಣದಲ್ಲಿ ಒಂದಷ್ಟು ಪ್ರತಿದಿನ ತೆಗೆದಿರಿಸಿ ಡಬ್ಬದಲ್ಲಿ ಹಾಕಿ ವರ್ಷಕ್ಕೊಮ್ಮೆ ತಮ್ಮ ಹುಟ್ಟು ಹಬ್ಬದ ದಿನ ಒಟ್ಟು ಹಣ ಲೆಕ್ಕ ಮಾಡಿ ಸಾತ್ವಿಕ ಕಾರ್ಯಕ್ಕೆ ನೀಡುವ ಮೂಲಕ ಪಟ್ಟಣದ ಹೆಸರಾಂತ ಅಕ್ಕಿ ವ್ಯಾಪಾರಿ ಸಾಮಾಜಿಕ ಕಾರ್ಯಕರ್ತ ವಿನಾಯಕ ಭಟ್ಟ ಕವಾಳೆ ಮಾದರಿಯಾಗಿದ್ದಾರೆ.

ಕೆಲವರು ತಮ್ಮ ಹುಟ್ಟುಹಬ್ಬವನ್ನು ಸಾರ್ಥಕತೆಯಲ್ಲಿ ಆಚರಿಸುವ ನಿಟ್ಟಿನಲ್ಲಿ ರಕ್ತದಾನ, ರೋಗಿಗಳಿಗೆ ಹಣ್ಣು ಹಂಪಲು ನೀಡುವುದು, ವೃದ್ಧಾಶ್ರಮಗಳಿಗೆ ಸೇವೆ ಸಲ್ಲಿಸುವುದು, ಗುಡಿಗೋಪುರಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡುವುದರೊಂದಿಗೆ ಆಚರಿಸುತ್ತಾರೆ. ಇದೆಲ್ಲಕ್ಕೂ ಮಿಗಿಲಾಗಿ ಕಷ್ಟಕಾರ್ಪಣ್ಯಗಳನ್ನು ತೊಡೆದು ಬಡತನವನ್ನೂ ಮೆಟ್ಟಿನಿಲ್ಲಬಲ್ಲ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಹಕರಿಸಿ ತಮ್ಮ ಹುಟ್ಟು ಹಬ್ಬಕ್ಕೆ ಸುಖಾ ಸುಮ್ಮನೆ ಖರ್ಚುಮಾಡದೆ ಸಹಾಯ ಮಾಡಿರುವ ವಿನಾಯಕ ಭಟ್ಟ ಕವಾಳೆಯವರ ಸೇವೆ ಶ್ಲಾಘನೀಯವಾದುದು.
ಪಟ್ಟಣದಲ್ಲಿ ಹೆಸರಾಂತ ಅಕ್ಕಿ ವ್ಯಾಪಾರಿಯಾಗಿರುವ ವಿನಾಯಕ ಭಟ್ಟ ಕವಾಳೆ ಕಳೆದ 17 ವರ್ಷಗಳಿಂದ ಕೈಲಾದಷ್ಟು ಧನ ಸಹಾಯ ಮಾಡುವ ಪ್ರವೃತ್ತಿ ಹೊಂದಿದ್ದು ಈ ಭಾರಿ IAS ಓದುತ್ತಿರುವ ಗೌಳಿ ಸಮುದಾಯದ ಬಡ ಕುಟುಂಬದ ಕರಡೊಳ್ಳಿ ಮೂಲದ ರಾಮನಾಥ ಸಿಂಧೆ ಅವರಿಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಆರ್ಥಿಕ ನೆರವನ್ನು ವಿದ್ಯಾಭ್ಯಾಸದ ನೆರವಿಗಾಗಿ ನೀಡಿದ್ದಾರೆ.ಇವರಿಂದ ಪ್ರೇರಣೆ ಪಡೆದು ಕಪಿಲಾ ಕಲೆಕ್ಷನ್ಸ್ ನ ಶ್ರೀಧರ ಭಟ್ ಸಹ ರಾಮನಾಥ ಸಿಂಧೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.

ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ರಾಮನಾಥ ಸಿಂಧೆ ಉನ್ನತ ಶಿಕ್ಷಣದ ಕನಸು ಕಂಡು ಅದರ ಸಾಕಾರಕ್ಕೆ ಪಟ್ಟು ಬಿಡದೇ ಪ್ರಯತ್ನಿಸುತ್ತಿದ್ದಾರೆ. ಕಳೆದ 4 ಬಾರಿ ಪ್ರಯತ್ನಿಸಿ ಫಲಪ್ರದ ಆಗದೇ ಇದ್ದಾಗ ಈಗ 5 ನೆ ಬಾರಿ ಅದೃಷ್ಟದ ಪರೀಕ್ಷೆಗೆ ಸಜ್ಜಾಗಿದ್ದಾರೆ.ಇವರ ಉನ್ನತ ಶಿಕ್ಷಣದ ಕನಸಿಗೆ ನೆರವಾದ ವಿನಾಯಕ ಭಟ್ಟ ಕವಾಳೆ ಮತ್ತು ಶ್ರೀಧರ ಭಟ್ಟ ಅವರ ಸಹಾಯವನ್ನು ಶಿಕ್ಷಣ ಪ್ರೇಮಿಗಳು ಶ್ಲಾಘಿಸಿದ್ದಾರೆ.
Prathidvani Yellapura