


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಮಳೆಗಾಲದ ಆರಂಭಕ್ಕೂ ಮುನ್ನಾ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದ್ದು ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಇತರೆ ಇಲಾಖೆಗಳ ಸಹಕಾರದೊಂದಿಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಾ ಆರೋಗ್ಯ ಕಾಪಾಡುವ ಆಂಧೋಲನವಾಗಬೇಕಿದೆ ಎಂದು ತಾಲೂಕು ದಂಡಾಧಿಕಾರಿ ತನುಜಾ ಟಿ ಸವದತ್ತಿ ಹೇಳಿದರು.

ಅವರು ತಮ್ಮ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆಗಳನ್ನೊಳಗೊಂಡ ಸಮನ್ವಯ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿದೆಡೆ ಕಲುಷಿತ ನೀರಿನ ಪ್ರಕರಣಗಳು ಹೆಚ್ಚುತ್ತಿದ್ದು ನಮ್ಮ ತಾಲೂಕಿನಲ್ಲಿ ಇಂತಹ ಪ್ರಕರಣಗಳು ಆಗದಂತೆ ಜಾಗೃತಿ ವಹಿಸಬೇಕಿದೆ. ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ ಕುಡಿಯುವ ನೀರಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆಯಿಂದ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಬೇಕಿದೆ ಎಂದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಟರಾಜ್ ಕೆ ಲಸಿಕೆ ಕಾರ್ಯಪಡೆ ಕುರಿತು ಮಾತನಾಡಿ, ಯಾವುದೇ ಮಗು ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಲು ಕರೆ ನೀಡಿದರು. ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಲ್ಲಿ ದಡಾರ ಕೂಡಾ ಒಂದಾಗಿದ್ದು ಅದರ ನಿರ್ಮೂಲನೆಗೆ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಮಳೆಗಾಲದಲ್ಲಿ ಮನೆ, ಅಂಗಡಿಗಳ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕಿದೆ. ನಿಧಾನವಾಗಿ ಡೆಂಗ್ಯೂ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದು ತಾಲೂಕಿನಲ್ಲಿ ವಿರಳವಾಗಿದ್ದರೂ ಹೊರಗಿನಿಂದ ಬರುವ ಸಾಧ್ಯತೆಗಳು ಹೆಚ್ಚಿದ್ದು ಸಾರ್ವಜನಿಕರು ಡೆಂಗ್ಯೂ ಕುರಿತಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪವಾರ್ ಸಭೆಯಲ್ಲಿ ತಿಳಿಸಿದರು.
ಎಲ್ಲಾ ಕಚೇರಿಗಳಿಗಳಲ್ಲೂ ತಂಬಾಕು ಮುಕ್ತ ಕಚೇರಿ ನಾಮಫಲಕ ಅಳವಡಿಸುವಂತೆಯೂ ಮತ್ತು ಅನಧಿಕೃತ ತಂಬಾಕು ವ್ಯವಹಾರ ಸ್ಥಳಗಳ ಮೇಲೆ ಧಾಳಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ ಭಟ್ಟ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಾಳೀಕೋಟೆ, ಬಿಪಿಎಂ ಎಸ್.ಎಸ್ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರತಿ ಇಲಾಖೆಗಳು ಸಾಂಕ್ರಾಮಿಕ ರೋಗ ಹರಡದಂತೆ ನೈರ್ಮಲ್ಯ ಕಾಪಾಡಲಾಗಿದೆ ಎಂಬ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆಯೂ ತಮ್ಮ ಕಚೇರಿಗಳ ಶೌಚಾಲಯಗಳ ಶುಚಿತ್ವವನ್ನು ಕಾಪಾಡಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ. ಕೆಲ ಕಚೇರಿಗಳಲ್ಲಿ ಶೌಚಾಲಯದ ವ್ಯವಸ್ಥೆ ಅಸ್ತವ್ಯಸ್ಥವಾಗಿದ್ದು ಎಲ್ಲೆಂದರಲ್ಲಿ ತಂಬಾಕು ಉಗಿದಿರುವುದು ಕಂಡು ಬರುತ್ತದೆ. ಇದನ್ನು ತಡೆಗಟ್ಟಲು ಮೇಲೆ ಹೇಳಿದ ಫಲಕವನ್ನು ಹಾಕಿದಾಗ ಸಾರ್ವಜನಿಕ ಜಾಗೃತಿ ಮೂಡಿಸಬಹುದಾಗಿದೆ ಮತ್ತು ಕಾಲಕಾಲಕ್ಕೆ ಆರೋಗ್ಯ ಇಲಾಖೆಯಿಂದ ಕಚೇರಿಗಳ ಭೇಟಿ ನೀಡಿ ಪರಿಶೀಲಿಸಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಿ ರಾಜ್ಯದಲ್ಲೇ ಯಲ್ಲಾಪುರ ತಾಲೂಕು ಮಾದರಿಯಾಗಬಹುದಾಗಿದೆ ಎಂದು ಈ ಸಂದರ್ಭದಲ್ಲಿ ಮಾಧ್ಯಮದವರು ಸಲಹೆ ನೀಡಿದರು.






