
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಅರಣ್ಯ ಇಲಾಖೆ ಅರಣ್ಯ ರಕ್ಷಣೆಗೆಂದು ಹಾಕುವ ಬೇಲಿಗೇ ರಕ್ಷಣೆ ಬೇಕಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಇಲಾಖೆಗಳು ತಮ್ಮ ವಿವೇಚನೆಗೆ ಬಂದಂತೆ ಯೋಜನೆಗಳಿಗೆ ಹಣ ಸುರಿಯುತ್ತ ಬಂದಿದ್ದು ಅದರಲ್ಲಿ ಅರಣ್ಯಕ್ಕೆ ತಂತಿ ಬೇಲಿ ಅಳವಡಿಸುವ ವಿಚಾರ ಸಮಸ್ಯೆಯಾಗಿಯೇ ಉಳಿದಿದ್ದು ಸದಾ ಜೀವಂತವಾಗಿದೆ.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ವಿಶಾಲವಾದ ಅರಣ್ಯವನ್ನು ತಂತಿ ಬೇಲಿ ಹಾಕಿ ರಕ್ಷಿಸುತ್ತೇವೆಂಬುದೇ ಹಾಸ್ಯಾಸ್ಪದ ಸಂಗತಿ ಆದರು ತಮ್ಮ ಕೈಲಾದ ಮಟ್ಟಿಗಾದರು ಅರಣ್ಯ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ ಕೆಲವು ಕಡೆ ವಿಶೇಷವಾಗಿ ರಸ್ತೆ ಬದಿಯಲ್ಲಿ ಸಿಮೆಂಟ್ ಕಂಬಹಾಕಿ ಅದರಲ್ಲಿ ತಂತಿ ಪೋಣಿಸಿ ಬೇಲಿ ಹಾಕಿದ್ದಾರೆ. ಬೇಲಿ ಹಾಕಿದ ಕೆಲವೇ ದಿನಗಳಲ್ಲಿ ಗಾಳಿಯ ರಭಸ ಮತ್ತು ಮಳೆಯ ಆರ್ಭಟಕ್ಕೆ ಕೆಲವೆಡೆ ಬೃಹತ್ ಗಾತ್ರದ ಮರಗಳ ಭಾರದ ರೆಂಬೆಕೊಂಬೆಗಳು ಧರೆಗುರುಳಿದ್ದು ಈ ಸಂದರ್ಭದಲ್ಲಿ ಮುರಿದು ಬಿದ್ದ ಕಂಬಗಳು ಕಿತ್ತುಹೋದ ಮುಳ್ಳು ತಂತಿಗಳು ಇಂದಿಗು ಹಾಗೆ ಬಿದ್ದಿವೆ.
ಅರಣ್ಯ ರಕ್ಷಣೆಗೆಂದು ಅಳವಡಿಸಿದ ಬೇಲಿಗಳನ್ನು ರಕ್ಷಿಸುವ ಕಾರ್ಯ ಇಲಾಖೆಯಿಂದಲೆ ಜರುಗಬೇಕಿದೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಹಾಕಿದ ಬೇಲಿ ನಿರ್ವಹಣೆ ಇಲ್ಲದೆ ಹಾಳಾಗಿ ಹೋದರೆ ಅದಕ್ಕೆ ಇಲಾಖೆಯೆ ಹೊಣೆಯಾಗಬೇಕಾಗುತ್ತದೆ. ತೆರಿಗೆ ಹಣವಿದೆ ಎಂದು ಮತ್ತೆಮತ್ತೆ ಬೇಲಿ ಹಾಕುವುದಕ್ಕೆ ಹಣ ಬಳಸುತ್ತಿದ್ದರೆ ಅರ್ಥವೇ ಇಲ್ಲದಂತಾಗಲಿದೆ ಎಂಬುದು ಇದೇ ರಸ್ತೆಯಲ್ಲಿ ಸಂಚರಿಸುವ ಸಾಮಾನ್ಯ ನಾಗರಿಕರ ಅಭಿಪ್ರಾಯವಾಗಿದೆ.

ಕಣ್ಣಿಗೆರೆ ರಸ್ತೆಯಲ್ಲಿ ಅಳವಡಿಸಿರುವ ತಂತಿ ಬೇಲಿಗೆ ಎಷ್ಟು ವರ್ಷವಾಯಿತು ? ಇದೀಗ ಪಾಳು ಬೀಳುತ್ತಿದ್ದು ನಿರ್ವಹಣೆಗೆಂದು ಹಣ ಸುರಿಯುತ್ತಿದ್ದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ. ಅಧಿಕಾರಿಗಳು ಗಮನ ಹರಿಸಿ ಬಿದ್ದಿರುವ ಕಂಬಗಳನ್ನೇ ಪುನಃ ನಿಲ್ಲಿಸಿ ತುಂಡಾದ ತಂತಿಗಳನ್ನು ಜೋಡಿಸಿದರೆ ಬೇಲಿ ಗಟ್ಟಿಮುಟ್ಟಾಗುತ್ತದೆ. ಅದನ್ನು ಬಿಟ್ಟು ಮತ್ತೊಮ್ಮೆ ಬೇಲಿ ಹಾಕಲು ಹಣ ಸುರಿದರೆ ತೆರಿಗೆ ಹಣಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ವಿಲ್ಸನ್ ಫರ್ನಾಂಡೀಸ್ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ



Prathidvani Yellapura