
ಪ್ರತಿಧ್ವನಿ,ಯಲ್ಲಾಪುರ : ಅಂಕಣಕಾರರು, ಯಕ್ಷಗಾನ ಅರ್ಥಧಾರಿಗಳೂ ಆದ ಅನಂತ ಮಹಾಬಲೇಶ್ವರ ವೈದ್ಯ (70) ಜುಲೈ.24 ರಂದು ಇಹಲೋಕ ತ್ಯಜಿಸಿದರು. ಇದರೊಂದಿಗೆ ಯಲ್ಲಾಪುರ ಪಾಂಡಿತ್ಯದ ಹಿರಿಯ ಕೊಂಡಿಯೊಂದು ಕಳಚಿಕೊಂಡಾಂತಾಗಿ ಸರಸ್ವತ ಲೋಕಕ್ಕೆ ತಬಲಾರದ ನಷ್ಟವಾದಂತಾಗಿದೆ..
ಅವರು ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.
ದಿವಂಗತರು ಕನ್ನಡ ಮತ್ತು ಸಂಸ್ಕೃತ ಅಧ್ಯಯನಶೀಲರಾಗಿದ್ದು, ರಾಮಾಯಣ, ಭಾರತದ ಕುರಿತು ಸಾಕಷ್ಟು ಪ್ರಭುತ್ವ ಸಾಧಿಸಿದ್ದರು. ದಕ್ಷಿಣೋತ್ತರ ಕನ್ನಡದ ಯಕ್ಷಗಾನ ಆರ್ಥಧಾರಿಯಾಗಿ, ಸಾಹಿತ್ಯ ರತ್ನ ಬಿರುದು ಪಡೆದು ಯಕ್ಷಗಾನ' ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಪ್ರಕಟಿಸಿದ್ದರು.ಜ್ಞಾನಯಜ್ಞ, ಪಾದುಕಾ ಪ್ರಧಾನ’ , ಮುಂತಾದ ಯಕ್ಷಗಾನ ಕೃತಿಗಳನ್ನು ರಚಿಸಿದ್ದರು. ಶ್ರೀಕೃಷ್ಣ ಸಂಧಾನವನ್ನು ಮರು ಮುದ್ರಣ ಮಾಡಿ ವಿಮರ್ಶಕರಾಗಿ ಗುರುತಿಸಿಕೊಂಡ ಅವರು, ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನೆಗಳನ್ನು ಸಂಗ್ರಹಿಸಿ ಜ್ಞಾನಯಜ್ಞ' ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಕೆಲವು ವರ್ಷಗಳ ಕಾಲ ಯಲ್ಲಾಪುರ ಸ.ಪ್ರ.ದ ಕಾಲೇಜಿನ ಉಪನ್ಯಾಸಕರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಹಲವು ದಿನಪತ್ರಿಕೆಗಳಲ್ಲಿ ಅಂಕಣ ಬರಹಗಳು ಪ್ರಕಟವಾಗುತ್ತಿದ್ದವು. ಮೂಲತಹ ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನ ಅವರು ಯಲ್ಲಾಪುರಕ್ಕೆ ಬಂದು ಪ್ರಕಾಶ ಮುದ್ರಣಾಲಯ ಸ್ಥಾಪಿಸಿದ್ದರು. ಅವರು ಮಡದಿ, ಓರ್ವ ಮಗ, ಈರ್ವರು ಪುತ್ರಿಯರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಹೊನ್ನಾವರದ ಕೆರೆಮನೆ ಯಕ್ಷಗಾನ ಮಂಡಳಿಯಿಂದ ಶಂಭು ಹೆಗಡೆ ರಾಷ್ರೀಯ ನಾಟ್ಯೋತ್ಸವದ ಸಂದರ್ಭದಲ್ಲಿ ಗೌರವ ಸನ್ಮಾನ ದೊರೆತಿದೆ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಅವರಿಂದ ಹವ್ಯಕ ಸಾಧಕರೆಂದು, ಕ.ಸಾ.ಪ. ಯಲ್ಲಾಪುರದಿಂದ ಗೌರವ ಸನ್ಮಾನ, ಸಾವಣ್ಣ ಪ್ರಕಾಶನ ಬೆಂಗಳೂರು ಮತ್ತು ಉಡುಪಿ ಮತ್ತು ಭ್ರಹ್ಮಾವರ ಕ.ಸಾ.ಪ ದಿಂದನಿಷ್ಕಾಮ’ ಪ್ರಶಸ್ತಿ ನೀಡಿ ಸನ್ಮಾನ ಪಡೆದಿದ್ದರು.

ನಿಧನ ಹೊಂದಿದ ಸುದ್ದಿ ತಿಳಿದ ತಕ್ಷಣ ಶಾಸಕ ಶಿವರಾಮ ಹೆಬ್ಬಾರ, ಹಿರಿಯ ಚಿಂತಕ ಪ್ರಮೋದ ಹೆಗಡೆ, ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕಾ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ, ಮಲೆನಾಡು ಕೃಷಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಹಿರಿಯ ಯಕ್ಷಗಾನ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ, ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೋಗಟಾ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಮತ್ತಿತರರು ಅಂತಿಮ ದರ್ಶನ ಪಡೆದರು.
Prathidvani Yellapura