
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….
ಪ್ರತಿಧ್ವನಿ, ಯಲ್ಲಾಪುರ : ಹಿಂದೂಗಳ ಹೊಸ ವರ್ಷಾಚರಣೆ ಆರಂಭವಾಗುವುದು ಯುಗಾದಿಯಿಂದ. ಹೊಸ ಸಂವತ್ಸರದೊಂದಿಗೆ ಪ್ರಾರಂಭವಾಗುವ ಹೊಸ ವರ್ಷ ಯಲ್ಲಾಪುರದಲ್ಲಿ ಅತ್ಯಂತ ಸಂಭ್ರಮ ಸಡಗರ, ವಿಜೃಂಬಣೆಯಿಂದ ಆಚರಿಸಲಾಗುತ್ತದೆ.
ಯುಗಾದಿಗೂ ಮುನ್ನಾ ಉತ್ಸವದ ಸಂಭ್ರಮಕ್ಕೆ ಬೈಕ್ ರ್ಯಾಲಿ ಜಾಗೃತಿ ಮೂಡಿಸುತ್ತದೆ. ನಂತರ ಯುಗಾದಿಯಂದು ಭವ್ಯ ಶೋಭಾಯಾತ್ರೆ ಆಯೋಜಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಚಾಂಗ ಪಠಣದೊಂದಿಗೆ ಮುಕ್ತಾಯ ಕಾಣುತ್ತದೆ. ಅದರಂತೆ ಈ ವರ್ಷದ ಯುಗಾದಿಯನ್ನು ಕಳೆದೆರಡು ಕೋವಿಡ್ ವರ್ಷಗಳ ಯುಗಾದಿಗಿಂತ ವಿಜೃಂಬಣೆಯಿಂದ ಆಚರಿಸಲಾಯಿತು.

ವಿಶೇಷವಾದ ಸ್ತಬ್ಧ ಚಿತ್ರಗಳ ಮೆರವಣಿಗೆ ಶೋಭಾಯಾತ್ರೆಗೆ ಕಳೆ ತಂದಿತ್ತು. ಅದರಲ್ಲೂ ತಿಲಕ್ಚೌಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.

ದಿ. ಡಾ. ಪುನೀತ್ರಾಜಕುಮಾರ್ ಮತ್ತು ರಾಜ್ ಬಿ ಶೆಟ್ಟಿ ತದ್ರೂಪಿಗಳು ಮೆರವಣಿಗೆಯ ಅಂದ ಹೆಚ್ಚಿಸಿದರು.

ತ್ರಿಶೂಲದ ಮೇಲೆ ಕುಳಿತ ಶಿವನ ಪಾತ್ರಧಾರಿ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ಅರ್ಧನಾರೀಶ್ವರನ ಪಾತ್ರದಲ್ಲಿ ಗಿರೀಶ್ ಪೈ ಮಿಂಚಿದರು. ಇನ್ನುಳಿದಂತೆ ಮಿಕ್ಕಿ ಮೌಸ್ಗಳ ಮಧ್ಯೆ ಶಿವನು ಕುಳಿತ ದೃಶ್ಯ ವಿಶೇಷವೆನಿಸಿತ್ತು. ಅಪ್ಪುವಿನ ಫೋಟೋ ಹೊತ್ತ ಶಿವಾಜಿಯ ಮೂರ್ತಿಯು ಮೆರವಣಿಗೆಯಲ್ಲಿತ್ತು.



ಕುಂದಾಪುರದಿAದ ಆಗಮಿಸಿದ ಭಜನಾ ತಂಡ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಆದ್ಯಾತ್ಮ ವಾತಾವರಣ ಸೃಷ್ಟಿ ಮಾಡಿತ್ತು. ಚಂಡೆಯ ಸದ್ದು , ಅಂಕೋಲಾ ಝಾಂಜ್ ಶಬ್ಧಕ್ಕೆ ಮಹಿಳೆಯರು ಮಕ್ಕಳು ಹೆಜ್ಜೆ ಹಾಕಿದರು.




ಕಾಲ ಬದಲಾದಂತೆ ಯಾತ್ರೆಗಳ ಸ್ವರೂಪವೂ ಬದಲಾಗುತ್ತಾ ಸಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಶೋಭಾಯಾತ್ರೆಯಲ್ಲಿ ಡಿಜೆಯ ಸಪ್ಪಳಕ್ಕೆ ಹೆಜ್ಜೆ ಹಾಕದವರೇ ಇಲ್ಲ. ವಯಸ್ಸಿನ ಅಂತರವಿಲ್ಲದೇ , ಹೆಣ್ಣು-ಗಂಡು ಬೇಧವಿಲ್ಲದೇ ಸಂಭ್ರಮದಲ್ಲಿ ನೃತ್ಯ ಮಾಡುತ್ತಾ ಶ್ರೀರಾಮ, ಭಾರತಮಾತೆ, ಶಿವಾಜಿ, ಭವಾನಿ, ಓಂಕಾರ, ಧರ್ಮರಕ್ಷಣೆಯ ವಾಕ್ಯಗಳಿಗೆ ಜೈಕಾರ ಕೂಗುತ್ತಾ ಶೋಭಯಾತ್ರೆಯು ಕೇಸರಿಮಯವಾಗಿ ಕಂಗೊಳಿಸಿತು.





ಶೋಭಾಯಾತ್ರೆಯಲ್ಲಿ ಸಚಿವ ಶಿವರಾಮ ಹೆಬ್ಬಾರ್ ಭಾಗವಹಿಸಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು. ಇದೇ ಮೆರವಣಿಗೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಭಾಗವಹಿಸಿದ್ದು ಬರಲಿರುವ ಚುನಾವಣೆಯಲ್ಲಿ ಎದುರಾಳಿಗಳಾಗಲಿರುವ ಹೆಬ್ಬಾರ್- ವಿ.ಎಸ್. ಪಾಟೀಲ ಮುಖಾಮುಖಿಯಾಗಿ ಹಸ್ತಲಾಘವ ಮಾಡಿದರು. ಸಚಿವರ ಪತ್ನಿ ವನಜಾಕ್ಷಿ ಹೆಬ್ಬಾರ್ ಸಹ ಮಹಿಳೆಯರೊಂದಿಗೆ ಬೆರೆತು ಯುಗಾದಿ ಉತ್ಸವದ ಸಂಭ್ರಮಾಚರಣೆಯಲ್ಲಿ ಹೆಜ್ಜೆ ಹಾಕಿದರು.
ಅಂತಿಮವಾಗಿ ಗ್ರಾಮದೇವಿ ದೇವಸ್ಥಾನ ತಲುಪಿದ ಶೋಭಾಯಾತ್ರೆಯು ವೇದಮೂರ್ತಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆಯವರ ಪಂಚಾಗ ಪಠಣದೊಂದಿಗೆ ಮುಕ್ತಾಯ ಕಂಡಿತು.
Prathidvani Yellapura