



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಹಣಕಾಸು ಸಂಸ್ಥೆಗಳು, ಬಂಗಾರದ ಅಂಗಡಿಗಳು, ಕೋ-ಆಪರೇಟಿವ್ ಸೊಸೈಟಿಗಳು ಕೈಗೊಳ್ಳಬೇಕಾದ ಭದ್ರತೆಯ ಕುರಿತಾಗಿ ಸಂಸ್ಥೆಯ ಅಧಿಕಾರಿಗಳು, ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ಸೂಚನೆ ಸಂದೇಶಗಳನ್ನು ನೀಡುವ ಸಲುವಾಗಿ ಯಲ್ಲಾಪುರ ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಸಭೆ ನಡೆಸಲಾಯಿತು.

ಸಭೆಯ ಮುಖ್ಯಸ್ಥಿಕೆ ವಹಿಸಿದ್ದ ಪಿಐ ರಂಗನಾಥ ನೀಲಮ್ಮನವರ್ ಮಾತನಾಡಿ ಹಣಕಾಸು ಸಂಸ್ಥೆಗಳು ಬೇರೆಲ್ಲಾ ವ್ಯಾಪಾರ ವಹಿವಾಟಿಗಳಿಗಿಂತ ಭದ್ರತೆಯ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ. ಬ್ಯಾಂಕಿನ ಮುಖ್ಯದ್ವಾರ , ಕಿಟಕಿಗಳು ಗಟ್ಟಿಮುಟ್ಟಾದ ವಸ್ತುಗಳಿಂದ ಭದ್ರಪಡಿಸಬೇಕಿದೆ. ಮತ್ತು ಉತ್ತಮ ಗುಣಮಟ್ಟದ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕಿದೆ. ಕಡಿಮೆ ಬೆಲೆಯ ಕಡಿಮೆ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಿ ಹಣದ ವಿಚಾರದಲ್ಲಿ ಜಿಪುಣತನ ತೋರಿಸಿದರೆ ಮುಂದೆ ಆಗಬಹುದಾದ ಅನಾಹುತಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದರು.

ಬಹುತೇಕ ಎಟಿಎಂಗಳಲ್ಲಿ ಕಾವಲುಗಾರರು, ನಿರ್ವಾಹಕರಿಲ್ಲದೇ ಇರುವುದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಹಣಕಾಸು ಸಂಸ್ಥೆಗಳಿಗೆ ಹಲವು ಬಾರಿ ತಿಳಿಸಿದ್ದರೂ ನಿರ್ಲಕ್ಷ್ಯ ತೋರುತ್ತಿರುವುದು ಸಮಸ್ಯೆಯನ್ನು ಆಹ್ವಾನಿಸಿದಂತೆ ಎಂದು ಎಚ್ಚರಿಸಿದರು.

ಮತ್ತು ಕೆಲವು ಗ್ರಾಹಕರು ಅರಿವಿನ ಕೊರತೆಯಿಂದ ಎಟಿಎಂಗಳಲ್ಲಿ ಸಮಸ್ಯೆಗೆ ಸಿಲುಕಿ ಬ್ಯಾಂಕಿನವರನ್ನು ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ನೀಡಬೇಕಿದೆ. ಇಲ್ಲವಾದಲ್ಲಿ ಗ್ರಾಹಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಕೇವಲ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಸಾಲದು; ಬೆಳಕಿನ ವ್ಯವಸ್ಥೆ ಮತ್ತು ನಾಲ್ಕು ದಿಕ್ಕುಗಳ ದೃಶ್ಯವನ್ನೂ ಸೆರೆ ಹಿಡಿಯುವಂತೆ ಅಳವಡಿಸಬೇಕಿದೆ. ಇನ್ನೂ ಹೆಚ್ಚಿನ ಭದ್ರತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಕಳ್ಳತನದಂತಹ ಕೃತ್ಯಗಳನ್ನು ಸುಲಭವಾಗಿ ತಡೆಯಬಹುದಾಗಿದೆ ಎಂದು ಸಭೆಗೆ ವಿವರಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಶ್ಯಾಮ ಪವಾಸ್ಕರ, ನಸ್ರೀನ್ ತಾಜ್, ಸಿಬ್ಬಂದಿಗಳು ಉಪಸ್ಥಿತರಿದ್ದರು.






