
ಪ್ರತಿಧ್ವನಿ,ಯಲ್ಲಾಪುರ : ಭಾರತ ಚಂದ್ರನಲ್ಲಿಗೆ ಅಧ್ಯಯನ ಸಂಬಂಧ 3900 ಕೆ.ಜಿ ತೂಕ ಹೊತ್ತ ಉಪಗ್ರಹ ಉಡಾವಣೆ ಮಾಡಿ ಇತರೆ ದೇಶಗಳ ಎದುರು ತನ್ನ ದೇಶದ ತಂತ್ರಜ್ಞಾನದ ಶ್ರೇಷ್ಟತೆಯನ್ನು ಜಗತ್ತಿನೆದುರು ತೆರೆದಿಟ್ಟಿದೆ. ಹಗಲು ರಾತ್ರಿ ಎನ್ನದೆ ಅವಿಷ್ಕಾರದಲ್ಲಿ ತೊಡಗಿರುವ ವಿಜ್ಞಾನಿಗಳು ಒಂದೆಡೆ ದೇಶದ ಘನತೆ ಎತ್ತಿ ಹಿಡಿಯುತ್ತಿದ್ದರೆ ಯಲ್ಲಾಪುರ ತಾಲೂಕಿನಲ್ಲಿರುವ ಸಣ್ಣ ಪುಟ್ಟ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡದೆ ಸಂಬಂಧಪಟ್ಟ ಇಲಾಖೆಯವರು ನಗೆಪಾಟಿಲಿಗೆ ಗುರಿಯಾಗುತ್ತಿದ್ದಾರೆ.
ಯಲ್ಲಾಪುರ-ಮುಂಡಗೋಡು ರಸ್ತೆ ತೀವ್ರ ಹದಗೆಟ್ಟಿದ್ದು ಬಸ್, ಲಾರಿ, ಕಾರು, ಟ್ರಾಕ್ಟರ್ ಹಾಗು ಹೀಗೂ ತಳುಕಿ ಬಳುಕಿ ರಸ್ತೆಯಲ್ಲಿ ಸಾಗುತ್ತದೆ ಆದರೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಪ್ರಾಣವನ್ನು ಪಣಕ್ಕಿಟ್ಟಂತೆ. ಅದರಲ್ಲು ವಿಶೇಷ ಚೇತನರಿಗೆ ಸರ್ಕಾರ ನೀಡಿರುವ ತ್ರಿಚಕ್ರ ವಾಹನದಲ್ಲಿ ಸಾಗುವುದು ಅಥವ ಸೈಕಲ್ ತುಳಿದು ಸಾಗುವವರಿಗೆ ನರಕ ದರ್ಶನವಾಗುವುದಂತು ಖಂಡಿತ.
ಸರ್ಕಾರಕ್ಕೆ ತೆರಿಗೆ ಕಟ್ಟುವ ಸಾರ್ವಜನಿಕ ಕೇಳುವುದಾದರು ಏನು ? ಸಂಚಾರಕ್ಕೆ ಉತ್ತಮ ರಸ್ತೆ, ಗಟಾರ, ಆಸ್ಪತ್ರೆ, ಸಾರಿಗೆ, ಶಿಕ್ಷಣ,ವಿದ್ಯುತ್, ನೀರು; ಇವೆಲ್ಲವು ಕನಿಷ್ಠ ಮೂಲಭೂತ ಸೌಕರ್ಯಗಳು ಇದನ್ನು ಸರಿಯಾಗಿ ಕೊಡದಾದ ಮೇಲೆ ಸರ್ಕಾರ ಅನ್ನುವ ವ್ಯವಸ್ಥೆ ಬೇಡವೆ ಬೇಡ ಅದನ್ನು ಸಹ ಯಾವುದಾದರು ಎನ್.ಜಿ.ಒ ಸಂಸ್ಥೆಗಳು ಅಥವ ಮಠ ಮಂದಿರಗಳಿಗೆ ಜವಾಬ್ದಾರಿ ನೀಡಿದರೆ ಉತ್ತಮ. ಸಾರ್ವಜನಿಕರು ತಮ್ಮ ತೆರಿಗೆ ಹಣ ಸಂಪೂರ್ಣ ಅವುಗಳಿಗೆ ಭರಣ ಮಾಡಿದರೆ ಸಾಕು ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.
ಚಂದ್ರನ ಮೇಲೆ ಕಾಲಿಡುವ ಪ್ರಯತ್ನದಲ್ಲಿ ನಾವಿದ್ದಾಗ ಕನಿಷ್ಠ ಮುಂಡಗೋಡು ರಸ್ತೆ ಯಲ್ಲಿ ಸಂಚರಿಸಲು ಅಸಾದ್ಯ ಎಂದರೆ ಆಡಳಿತ ವ್ಯವಸ್ಥೆ ನಾಚಬೇಕಿದೆ.
ಸರ್ಕಾರ ಪ್ರತಿವರ್ಷ ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವ ರಸ್ತೆ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿದರೆ ಪದೆಪದೆ ಹಣ ಸುರಿಯುವುದನ್ನು ತಪ್ಪಿಸಬಹುದಾಗಿದೆ. ವಿದೇಶಗಳಲ್ಲಿ ರಸ್ತೆಯ ಗುಣಮಟ್ಟ ಅಷ್ಟೊಂದು ಗಟ್ಟಿಮುಟ್ಟಾಗಿರುತ್ತದೆ ಅದನ್ನ ನೋಡಿ ಅಧ್ಯಯನ ಮಾಡಲು ಇಲ್ಲಿನ ಅಧಿಕಾರಿಗಳ ತಂಡ ಒಮ್ಮೊಮ್ಮೆ ಹೋಗಿ ಬಂದರು ಪರವಾಗಿಲ್ಲ ಕಾರಣ ಅದರ ಖರ್ಚು ಸಹ ಸಾರ್ವಜನಿಕರ ಹಣದಿಂದಲೆ ಭರಿಸಲಾಗುತ್ತದೆ. ಅದನ್ನು ನೋಡಿ ಬಂದು ಇಲ್ಲಿನ ಕಾಮಗಾರಿ ಗುಣಮಟ್ಟದಲ್ಲಿ ನಿರ್ಮಿಸಿ ತೋರಿಸಿದಾಗ ಸಾರ್ವಜನಿಕರ ತೆರಿಗೆ ಹಣದಿಂದ ಪಡೆವ ಸಂಬಳಕ್ಕೆ ಅರ್ಥ ಬರುತ್ತದೆ ಇಲ್ಲವೆಂದರೆ ಸಾರ್ವಜನಿಕ ಶಾಪಕ್ಕೆ ಗುರಿಯಾಗುತ್ತೀರಿ.
ಕಾಮಗಾರಿಗೆ ಹಾಕುವ ಹಣ ದ್ವಿಗುಣವಾದರು ಚಿಂತೆ ಇಲ್ಲ ಹಣ ಸಾರ್ವಜನಿಕರದು. ಅದರ ಚಿಂತೆ ನಿಮಗೆ ಬೇಡ ಬೇಕಂತಲೆ ಎಲ್ಲೆಂದರಲ್ಲಿ ರಸ್ತೆ ನಿರ್ಮಿಸಿ ಹಾಳುಗೆಡವುವ ಬದಲು ಒಂದು ಉತ್ತಮ ರಸ್ತೆ ನಿರ್ಮಿಸಿ ” ಹತ್ತು ಹಡೆಯುವುದಕ್ಕಿಂತ ಒಂದು ಮುತ್ತು ಹಡೆ “ ಎಂಬ ಗಾದೆ ಮಾತಿನಂತೆ ಸಂಖ್ಯೆ ಹೆಚ್ಚಿದ್ದು ಏನು ಪ್ರಯೋಜನ ಗುಣಮಟ್ಟ ಮುಖ್ಯ. ಅಲ್ಲವೆ?
ಇಂತಹ ತತ್ವದಡಿಯಲ್ಲಿ ಬದ್ದತೆಯಡಿ ಕರ್ತವ್ಯ ಮಾಡುವ ಒಂದಷ್ಟು ಅಧಿಕಾರಿಗಳು ಪ್ರಾಯೋಗಿಕವಾಗಿ ಒಂದು ವರ್ಷ ಸಂಖ್ಯೆಗೆ ಮಹತ್ವ ನೀಡದೆ ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾಮಗಾರಿ ಮಾಡಿಸಿದರೆ ಅಂತಹ ಅಧಿಕಾರಿಗಳ ಹೆಸರು ನೂರುಕಾಲ ಜನಮಾನಸದಲ್ಲಿ ಉಳಿದು ಹೋಗುತ್ತದೆ.
ಕಳೆದೆರಡು ದಿನಗಳ ಹಿಂದೆ ಮುಂಡಗೋಡು ರಸ್ತೆಯಲ್ಲಿ ಚಲಿಸುತ್ತಿದ್ದ ವಿಶೇಷ ಚೇತನರ ತ್ರಿಚಕ್ರ ವಾಹನ ಎದುರುಗಡೆಯಿಂದ ಬಸ್ ಬರುತ್ತಿದ್ದಂತೆ ಎತ್ತ ಸಾಗುವುದು ತಿಳಿಯದೆ ರಸ್ತೆಯಲ್ಲೆ ನಿಂತುಬಿಟ್ಟರು ಆ ನಂತರ ನಿಧಾನವಾಗಿ ಬಸ್ ತೆರಳಿದ ನಂತರ ಅವರು ತೆರಳಿದರು. ಸರ್ಕಾರ ವಿಶೇಷ ಚೇತನರ ಓಡಾಟಕ್ಕೆ ವಾಹನ ನೀಡಿ ರಸ್ತೆ ಪರಿಸ್ಥಿತಿ ಈ ರೀತಿ ಇಟ್ಟಿದ್ದರೆ ಸಾವಿನ ಸನಿಹಕ್ಕೆ ಕಳಿಸುವ ಮದ್ಯವರ್ತಿಯಂತಾಯಿತಲ್ಲವೆ? ಇದು ವ್ಯವಸ್ಥೆಯ ಅವ್ಯವಸ್ಥೆಯನ್ನು ಅಣಕಿಸುವಂತಿದೆ ಎನ್ನುತ್ತಿದ್ದಾರೆ ನಾಗರಿಕರು.
Prathidvani Yellapura