


ಅತಿಥಿ ಬರಹ ಕೇಬಲ್ ನಾಗೇಶ್,,ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ನೂರಾರು ವರ್ಷಗಳ ಸಂಘರ್ಷದ ಇತಿಹಾಸಕ್ಕೆ ಅಂತ್ಯ ಹಾಡಿ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಜನವರಿ 22 2024 ರಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟಯಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯ ನಾಥ್ ಅವರ ನೇತೃತ್ವದಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡಿತು.

ಸುದೀರ್ಘ ಕಾಲದ ಹೋರಾಟದ ಪ್ರತೀಕವಾಗಿ ತಲೆ ಎತ್ತಿ ನಿಂತ ರಾಮ ಮಂದಿರ ದರ್ಶನಕ್ಕೆ ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿ ತಾಲೂಕಿನಿಂದ ಆಯ್ದ ಕೆಲವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಅದರಂತೆ ಯಲ್ಲಾಪುರ ತಾಲೂಕಿನಿಂದ ಪಟ್ಟಣದ 8 ಮಂದಿ ಮತ್ತು ಗ್ರಾಮೀಣ ಭಾಗದಿಂದ 6 ಮಂದಿ ಯಾತ್ರೆಗೆ ಹೊರಟರು.

ಯಲ್ಲಾಪುರ ಪಟ್ಟಣದ ಹೆಸರಾಂತ ಕೆತ್ತನೆ ಶಿಲ್ಪಿ ಅರುಣ ಬಿಕ್ಕುಗುಡಿಗಾರ, ವ್ಯಾಪಾರಸ್ಥ ಹನುಮಂತ ಎಸ್ ಶಿಂಗನಳ್ಳಿ , ಪತ್ರಕರ್ತ ಕೇಬಲ್ ನಾಗೇಶ್, ಕೇಶವ ದುರ್ಗಾ ಗಾಂವ್ಕರ್, ಅಕ್ಷಯ್ ಅಶೋಕ ಕಿತ್ತೂರ್, ಆಕಾಶ ಮಲ್ಲೇಶ ಅನಿಗೊಳ, ಯಾದವ ತುಕಾರಾಮ ಮರಾಠೆ, ಸುರೇಂದ್ರ ಮುರ್ಕುಂಬಿ ಸೇರಿದಂತೆ 8 ಮಂದಿ ಹಾಗು ಗ್ರಾಮೀಣ ಭಾಗದ ರಾಮಕೃಷ್ಣ ಗಣಪೂಮನೆ, ಉಮಾಮಹೇಶ್ವರ ಮೆಣಸುಮನೆ, ವಿ.ಪಿ.ಹೆಬ್ಬಾರ್ ಮಲವಳ್ಳಿ, ರಾಜಾರಾಮ ಗಾಂವ್ಕರ್, ರಾಮಚಂದ್ರ ಗಣಪುಮನೆ , ರಾಮಚಂದ್ರ ಸೇರಿದಂತೆ 6 ಮಂದಿ ಗ್ರಾಮೀಣ ಭಾಗದ ರಾಮಭಕ್ತರು ಅಯೋದ್ಯೆಗೆ ಪಯಣ ಬೆಳೆಸಿದರು.


ಯಲ್ಲಾಪುರ ತಾಲೂಕಿನ ವಿಶ್ವ ಹಿಂದು ಪರಿಷತ್ ಪ್ರಮುಖರು ಮತ್ತು ಯಾತ್ರೆಗೆ ಹೊರಟ ರಾಮ ಭಕ್ತರ ಕುಟುಂಬದ ಸದಸ್ಯರು ಅದ್ದೂರಿಯಾಗಿ ಬೀಳ್ಕೊಡಲಾಯಿತು.

ಯಲ್ಲಾಪುರದಿಂದ ಅಯೋಧ್ಯೆ ಹೊರಟ ತಂಡ ಹುಬ್ಬಳ್ಳಿ ತಲುಪಿ ಅಲ್ಲಿ ಸಮಾವೇಶಗೊಂಡ ಬೆಳಗಾವಿ ಮತ್ತು ಶಿರಸಿ ವಿಭಾಗದ ಅಡಿಯಲ್ಲಿ ಸುಮಾರು ಒಂದು ಸಾವಿರಕ್ಕು ಅಧಿಕ ಯಾತ್ರಿಗಳಿಗೆ ವಿಶ್ವ ಹಿಂದು ಪರಿಷತ್ ಮತ್ತು ಇಂಡಿಯನ್ ರೈಲ್ವೆ ಡಿಪಾಟ್೯ಮೆಂಟ್ ಹಿರಿಯರು ಯಾತ್ರೆಯ ರೂಪುರೇಷೆ ವಿವರಿಸಿ ಮಾರ್ಗದರ್ಶನ ಮಾಡಿದರು.

ವಿಶ್ವ ಹಿಂದು ಪರಿಷತ್ ಅಡಿಯಲ್ಲಿ ಆಯೋಜಿಸಿದ ಅಯೋಧ್ಯೆ ರಾಮ ದರ್ಶನ ಪ್ರಯಾಣಕ್ಕೆ ಅಧಿಕೃತ ಗುರುತಿನ ಚೀಟಿ ವಿತರಿಸಿದರು.

ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಮದ್ಯಾಹ್ನ 2-30 ಕ್ಕೆ ಸರಿಯಾಗಿ ಅಯೋಧ್ಯೆ ಯಾತ್ರೆಗಾಗಿಯೆ ಸಿದ್ದಗೊಂಡ ಆಸ್ತ ಎಕ್ಸ್ಪ್ರೆಸ್ ಸದ್ದು ಮಾಡುತ್ತ ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸಿತು.


ಅಯೋಧ್ಯೆ ಯಾತ್ರಾರ್ಥಿಗಳಿಗಾಗಿಯೆ ಸಿದ್ದವಾದ ರೈಲಿನಲ್ಲಿ ಸಕಲ ಸೌಕರ್ಯ ಒದಗಿಸಲಾಗಿತ್ತು. ಮುಂಜಾನೆ ಕಾಫಿ, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಟೀ, ರಾತ್ರಿ ಭೋಜನ ನೀಡಲಾಗುತ್ತಿತ್ತು.



ವಿವಿಧ ಪ್ರದೇಶಗಳಿಂದ ಒಟ್ಟಾಗಿ ಅಯೋಧ್ಯೆ ಪ್ರಯಾಣದಲ್ಲಿ ಜೊತೆಯಾದ ರಾಮಭಕ್ತರ ರಾಮಜಯಘೋಷ, ಭಜನೆ, ಮಂತ್ರ ಪಠಣ ಎಲ್ಲವು ವಾತಾವರಣವನ್ನು ಆಧ್ಯಾತ್ಮ ಪರಿಸರವಾಗಿಸಿತ್ತು.

ವಿಶೇಷವಾಗಿ ಅಯೋಧ್ಯೆ ಕರಸೇವೆಯಲ್ಲಿ ತೊಡಗಿಕೊಂಡ ಅನೇಕ ಹಿರಿಯರು ತಮ್ಮ ಅನುಭವಗಳನ್ನು ವಿವರಿಸುತ್ತಾ ಪ್ರಸ್ಥುತ ಧರ್ಮದ ಪರಿಸ್ಥಿತಿ ಕುರಿತು ಸಂವಾದ ನಡೆಸುತ್ತ ಯಾತ್ರೆಯ ಜೊತೆಗೆ ಚಿಂತನ – ಮಂಥನ ನಡೆಯಿತು.

ಕರ್ನಾಟಕದಿಂದ ಹೊರಟ ರೈಲು ತೆಲಂಗಾಣ-ಮಹಾರಾಷ್ರ-ಮಧ್ಯಪ್ರದೇಶ ದಾಟಿ ಉತ್ತರ ಪ್ರದೇಶ ಪ್ರವೇಶಿಸಿತು ಸರಿ ಸುಮಾರು 2462 ಕಿಲೋಮೀಟರ್ ಸುದೀರ್ಘ ಪ್ರಯಾಣ ಮಾಡಿ ಅಯೋಧ್ಯೆ ತಲುಪಿತು.



ಅಯೋಧ್ಯಾಧಾಮ್ ರೈಲ್ವೆ ನಿಲ್ದಾಣದ ಸಮೀಪದಲ್ಲೆ ನಡೆದು ಸಾಗಿದರೆ ಮಣಿಪರ್ವತ ಎಂಬ ಟೆಂಟ್ ಸಿಟಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿತ್ತು.


ತೆಲಂಗಾಣ, ಆಂಧ್ರಪ್ರದೇಶ, ತಮಿಳು ನಾಡು, ಪಂಜಾಬ್, ದೆಹಲಿ, ಕೇರಳ, ಕರ್ನಾಟಕ ಹಾಗು ಇನ್ನಿತರೆ ರಾಜ್ಯಗಳ ರಾಮ ಭಕ್ತರಿಗೆಬವಸತಿ ವ್ಯವಸ್ಥೆ ಮಾಡಲಾಗಿತ್ತು ಜೊತೆಯಲ್ಲಿ ಊಟ,ತಿಂಡಿ,ಚಹ,ಕಾಫಿ,ಟೋಸ್ಟ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಲಗಲು ಸಹ ಪ್ರತಿಯೊಬ್ಬರಿಗು ಬೆಡ್,ಬೆಡ್ ಶೀಟ್,ರಗ್ ವ್ಯವಸ್ಥೆ ಮಾಡಲಾಗಿತ್ತು. ಅಚ್ಚುಕಟ್ಟಾದ ಸ್ನಾನದ ವ್ಯವಸ್ಥೆ ಶೌಚಾಲಯ ವ್ಯವಸ್ಥೆಕೂಡ ವ್ಯವಸ್ಥಿತವಾಗಿ ಕಲ್ಪಿಸಲಾಗಿತ್ತು.



ಅಯೋಧ್ಯಾ ಪತಿ ಪ್ರಭು ಶ್ರೀ ರಾಮನ (ರಾಮಲಲ್ಲಾ) ದರ್ಶನಕ್ಕೆ ಸರತಿ ಸಾಲಿನಲ್ಲಿ ತೆರಳಲಾಯಿತು ಮಂದಿರದ ಕೆತ್ತನೆ ಮೈ ನವಿರೇಳಿಸುವ ರಾಮನ ವಿಗ್ರಹ ಎಂತಹವರನ್ನು ಮಂತ್ರಮುಗ್ದವಾಗಿಸುವಂತಿತ್ತು. ಆಲಯದೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶಗಳಿಲ್ಲ, ಇನ್ನು ಕೆತ್ತನೆ ಕೆಲಸ ಕಾರ್ಯಗಳು ಭರದಿಂದ ಸಾಗಿದೆ.








ಅಯೋಧ್ಯೆಯಲ್ಲಿ ದಶರಥ ಮಹಲ್, ಹನುಮಗರಿ, ನಯಾಘಾಟ್, ಲತಾ ಮಂಗೇಶ್ಕರ್ ಚೌಕ್, ಸರಯೂ ನದಿ, ರಾಮ ಮಹಲ್, ಇನ್ನಿತರ ಪವಿತ್ರ ಸ್ಥಳಗಳ ಭೇಟಿ ಮಾಡಲಾಯಿತು.


ನಂತರ ಮರಳಿ ಪ್ರಯಾಣ ಬೆಳೆಸಿ ವಾಪಸ್ ಯಲ್ಲಾಪುರ ತಲುಪಲಾಯಿತು 17 ರಿಂದ 22 ರವರೆಗಿನ ಆರು ದಿನಗಳ ಆಧ್ಯಾತ್ಮ ಪಯಣ ಹೊಸ ಲೋಕದ ಪರಿಚಯ ಮಾಡಿಸಿದಂತಾಯಿತು. ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟ ಪರಂಪರೆ ಹೊತ್ತ ಹಿಂದು ಸಂಸ್ಕೃತಿ ದರ್ಶನ ಜೀವನದ ಮೌಲ್ಯಯುತ ಆದರ್ಶವಾಗಿದೆ ನೂರಾರು ವರ್ಷಗಳ ಸಂಘರ್ಷದ ನಂತರ ಪ್ರಭು ಶ್ರೀರಾಮನ ಆಲಯ ನಿರ್ಮಾಣ ನಮ್ಮೆಲ್ಲರ ಹೆಮ್ಮೆ ಮತ್ತು ಅದನ್ನು ಕಾಣುವುದೆ ನಮ್ಮ ಸೌಭಾಗ್ಯವಾಗಿದೆ. ಪ್ರತಿ ಹಿಂದು ಜೀವಿತಾವಧಿಯಲ್ಲಿ ಒಮ್ಮೆ ನೋಡಲೆಬೇಕಾದ ಧರ್ಮಕ್ಷೇತ್ರ ನಮ್ಮ ಪುಣ್ಯ ಭೂಮಿ ಅಯೋಧ್ಯೆ.

ಹಿಂದೆ ಕೇಳಿದ ಕೋಮು ಘರ್ಷಣೆ ಅಲ್ಲಿಲ್ಲ ಇದೀಗ ಸೌಹಾರ್ದತೆಗೆ ಭಾವೈಕ್ಯತೆಗೆ ಉದಾಹರಣೆಯಾಗಿ ನಿಲ್ಲ ಬಲ್ಲ ನಗರ ಎನಿಸಿಕೊಂಡಿದೆ ಅಯೋಧ್ಯೆ. ಇಲ್ಲಿನ ಹಿಂದುಗಳು ಮತ್ತು ಮುಸ್ಲಿಂ ಸಮುದಾಯದವರು ಅನ್ಯೋನ್ಯತೆಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಈಗಿರುವ ಪರಿಸ್ಥಿತಿಯಲ್ಲಿ ಸಂಘರ್ಷದ ವಿಚಾರಕ್ಕೆ ಸಮಯವಿಲ್ಲ ಕಾರಣ ದುಡಿದಷ್ಟು ದುಡಿಮೆ ಮನೆಮಂದಿಗೆಲ್ಲಾ ಕೈ ತುಂಬಾ ಕೆಲಸ. ಯಾರೊಬ್ಬರೂ ಕೆಲಸವಿಲ್ಲದೆ ಕುಳಿತುಕೊಳ್ಳುವ ಪ್ರಮೇಯವೆ ಇಲ್ಲ. ಎಲ್ಲರ ಆರ್ಥಿಕ ಪ್ರಗತಿಗೆ ಅಯೋಧ್ಯೆ ರಾಮ ಮಂದಿರ ಕಾರಣವಾಗಿದೆ. ಯಾವುದೆ ಪೊಲೀಸರು ಸಹ ಅತ್ಯಂತ ಸಂಯಮ ಮತ್ತು ಪ್ರೀತಿಯಿಂದ ಜನರೊಂದಿಗೆ ನಡೆದುಕೊಳ್ಳುತ್ತಾರೆ. ಶ್ರೀರಾಮನ ದರ್ಶನಕ್ಕೆ ವಿ.ಐ.ಪಿ, ವಿವಿಐಪಿ ಎಂಬ ಬೇಧವಿಲ್ಲ ಎಲ್ಲರು ಸರತಿಸಾಲಿನಲ್ಲಿ ನಿಂತು ರಾಮಲಲ್ಲಾನ ದರ್ಶನ ಪಡೆಯಬೇಕು. ಸರಯೂ ನದಿ ತೀರ ಲತಾ ಮಂಗೇಶ್ಕರ್ ಚೌಕ್ ಎಲ್ಲವು ಅತ್ಯಂತ ವೈಭವದಿಂದ ಕಾಣುವ ವಾತಾವರಣ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಕಲಿಯುಗದಲ್ಲಿ ರಾಮ ರಾಜ್ಯದ ಕಲ್ಪನೆಯತ್ತ ಅಯೋಧ್ಯೆ ಕೊಂಡೊಯ್ಯುವ ಪ್ರಯತ್ನವಂತು ಸಾಗಿರುವುದು ನೋಡುಗರ ಕಣ್ಣಿಗೆ ಗೋಚರಿಸುತ್ತದೆ.










ಅಯೋಧ್ಯೆ ಯಾತ್ರೆಯಲ್ಲಿ ಯಾತ್ರಿಗಳ ಸುರಕ್ಷತೆ, ಸ್ವಚ್ಚತೆ, ಊಟೋಪಚಾರ, ವೈದ್ಯಕೀಯ ವ್ಯವಸ್ಥೆ ಅತ್ಯಂತ ಅತ್ಯಂತ ಅಚ್ಚುಕಟ್ಟಾಗಿತ್ತು, ವಿಶ್ವ ಹಿಂದು ಪರಿಷತ್ ಪ್ರಮುಖರು ಮಹಿಳಾ ಪ್ರಮುಖರು ಯಾತ್ರಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದುದು ಬದ್ದತೆ ಎಷ್ಟಿದೆ ಎಂಬುದು ಸ್ಪಷ್ಟವಾಗಿತ್ತು. ಉತ್ತಮವಾದ ರಾಮದರ್ಶನ ಸೇವೆ ನಮಗೆಲ್ಲಾ ಬಲು ಹಿತವಾಗಿತ್ತು.

ಯಾತ್ರೆ ಮುಗಿಸಿ ಮರಳಿದ ಯಲ್ಲಾಪುರದ ಮೊದಲ ತಂಡಕ್ಕೆ ಭವ್ಯ ಸ್ವಾಗತ ಮತ್ತು ಅಭಿನಂದನೆಗಳನ್ನರ್ಪಿಸಿದ ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ನಾಗರಿಕ ವೇದಿಕೆ ಅಧ್ಯಕ್ಷ ಸಂಘದ ಪ್ರಮುಖ ರಾಮು ನಾಯ್ಕ್ , ತಳ್ಳಿಗೆರೆ ಗಜಾನನ ನಾಯ್ಕ್, ಸಿದ್ದಾರ್ಥ ನಂದೊಳ್ಳಿ ಮಠ, ಆಧಿತ್ಯ ಗುಡಿಗಾರ, ಅಶೋಕ ಕಿತ್ತೂರ್ ಇನ್ನಿತರರು ಯಾತ್ರಾರ್ಥಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಸ್ವಾಗತಿಸಿದರು.ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ನಾಗರಿಕ ವೇದಿಕೆ ಅಧ್ಯಕ್ಷ ಸಂಘದ ಪ್ರಮುಖ ರಾಮು ನಾಯ್ಕ್ , ತಳ್ಳಿಗೆರೆ ಗಜಾನನ ನಾಯ್ಕ್, ಸಿದ್ದಾರ್ಥ ನಂದೊಳ್ಳಿ ಮಠ, ಆಧಿತ್ಯ ಗುಡಿಗಾರ, ಅಶೋಕ ಕಿತ್ತೂರ್ ಇನ್ನಿತರರು ಯಾತ್ರಾರ್ಥಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಸ್ವಾಗತಿಸಿದರು.
ಜೈ ಶ್ರೀರಾಮ್, ಜೈ ಶ್ರೀರಾಮ್, ಜೈ ಶ್ರೀರಾಮ್


