
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಮಳೆ ಬಂದದ್ದು ತಡವಾಗಿದೆ ಆದರು ಕೆಲ ದಿನಗಳಿಂದ ಉತ್ತಮ ಮಳೆತ ಪ್ರವೇಶವಾಗಿದ್ದು ಮೊದಮೊದಲು ಮಳೆಯೇ ಇಲ್ಲವಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾದಂತಹ ಭಾವ ತಾಲೂಕಿನ ಎಲ್ಲಾ ರೈತರನ್ನು ಕಾಡಿತ್ತು. ಸದ್ಯ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಜು.22ರಂದು 119ಮಿ.ಮೀ ಮಳೆಯಾಗಿದ್ದು ಈವರೆಗೆ ಒಟ್ಟು 1087ಮಿ.ಮೀ ಮಳೆಯಾಗಿದೆ.

ಯಲ್ಲಾಪುರ ಸುತ್ತಮುತ್ತ ಭತ್ತದ ನಾಟಿ ಕಾರ್ಯ ಪ್ರತಿವರ್ಷವೂ ತಡವಾಗಿಯೇ ಪ್ರಾರಂಭವಾಗುವುದಾದರೂ ಮಡಿ ಕಟ್ಟುವುದು, ಬದ ಕಟ್ಟುವುದು, ಗದ್ದೆ ಹದ ಮಾಡಿಕೊಂಡು ನೀರು ಕಟ್ಟುವಂತಹ ಹಲವು ಚಟುವಟಿಕೆಗಳು ಪ್ರಾರಂಭವಾಗಿ ನೆಟ್ಟಿ ಕಾರ್ಯ ಈ ಸಮಯದಲ್ಲಿ ನಡೆಯಬೇಕಿತ್ತು. ಆದರೆ ರೈತರು ಮಳೆರಾಯನ ಬರುವಿಕೆಯನ್ನು ಅನುಮಾನಿಸಿ ತಡವಾಗಿ ಗದ್ದೆಗಿಳಿದಿದ್ದಾರೆ.

ಇದೀಗ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ. ಖಾಲಿ ಬಿಟ್ಟ ಗದ್ದೆಗಳಲ್ಲಿ ಎಲೆಗೊಬ್ಬರದ ರಾಶಿ ಬಿದ್ದಿದ್ದು ಇನ್ನೇನು ಉಳುಮೆ ಕಾರ್ಯ ಮುಗಿಸಿ ಪೈರಿನ ನಾಟಿ ಕಾರ್ಯ ಪ್ರಾರಂಭಿಸಬೇಕಿದೆ. ಕಿರವತ್ತಿ, ಮದನೂರು ಭಾಗಗಳಲ್ಲಿ ಕೃಷಿ ಚಟುವಟಿಕೆ ಚುರುಕಾಗಿದ್ದು ಈಗಾಗಲೇ ಮುಸುಕಿನ ಜೋಳ, ಹತ್ತಿ ಮತ್ತು ಕಬ್ಬಿನ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮುಸುಕಿನ ಜೋಳಕ್ಕೆ ಸೈನಿಕ ಹುಳು ಬಾಧೆ ಇದ್ದು ಬೀಳುತ್ತಿರುವ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಕೀಟದ ಬಾಧೆ ಕಡಿಮೆಯಾಗಲಿದೆ. ಮಳೆಯ ಏರಿಳಿತದ ಪರಿಣಾಮದಿಂದ ರೈತರು ಹತ್ತಿಯ ಬಿತ್ತನೆಗೆ ಹೆಚ್ಚು ಆಕರ್ಷಿತರಾಗದೇ ಮುಸುಕಿನ ಜೋಳವನ್ನು ಬೆಳೆಯಲು ಆಸಕ್ತಿ ತೋರಿದ್ದಾರೆ. ಅಂದಾಜಿನ ಪ್ರಕಾರ ಪ್ರಸಕ್ತ ವರ್ಷದಲ್ಲಿ 100 ಹೆಕ್ಟೇರ್ಗೂ ಅಧಿಕ ಸ್ಥಳದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ. ಭತ್ತದ ಬೆಳೆ ಉತ್ತಮವಾಗಿ ಕಂಡುಬಂದಿದೆ.

ಒಟ್ಟಿನಲ್ಲಿ ರೈತ ದೇಶದ ಬೆನ್ನೆಲುಬಾಗಿದ್ದು ಅನ್ನದಾತನ ಬದುಕು ಹಸನಾಗಿರಲು ಉತ್ತಮ ಮಳೆಯಾಗಬೇಕಿದೆ. ಕೇವಲ ಮಳೆಯಾದರೆ ಸಾಲದು; ಅದು ನೀರಾಗಿ ನಿಲ್ಲಬೇಕಿದೆ. ವರತೆ ಹೆಚ್ಚಾಗಬೇಕಿದೆ. ಆಗ ಮಾತ್ರ ಎಲ್ಲ ವಿಭಾಗದಲ್ಲೂ ಆರ್ಥಿಕ ಚಟುವಟಿಕೆ ಚುರುಕಾಗಿ ಮಾರುಕಟ್ಟೆ ವಾತಾವರಣ ಆಹ್ಲಾದಕರವಾಗಲಿದೆ.
Prathidvani Yellapura