


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಡಿನ ಸಮಸ್ತರೂ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಕೇವಲ ಅಧಿಕಾರಿ ವರ್ಗದವರೇ ಸರ್ಕಾರಿ ಆದೇಶಕ್ಕನುಸಾರ ಆಚರಿಸುವುದಲ್ಲ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಎಲ್ಲಾ ಇಲಾಖೆಗಳು ಒಟ್ಟಾಗಿ ಅದ್ದೂರಿಯಿಂದ ಆಚರಿಸಬೇಕಿದೆ. ಇಂತಹ ಬದ್ಧತೆಯ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು-ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕಿದೆ ಎಂದು ಯಲ್ಲಾಪುರ ತಹಸೀಲ್ದಾರ ಗುರುರಾಜ ಹೇಳಿದರು.

ಅವರು ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಹೇಳಿದರು.

ರಾಜ್ಯೋತ್ಸವ ಆಚರಣೆಯಲ್ಲಿ ನೆಲದ ಸಂಸ್ಕೃತಿ, ಆಚಾರ-ವಿಚಾರಗಳನ್ನು ತೋರ್ಪಡಿಸುವ ನಿಟ್ಟಿನಲ್ಲಿ ಸ್ತಬ್ಧಚಿತ್ರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಸಾರ್ವಜನಿಕ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕರ್ನಾಟಕವೆಂದು ನಾಮಕರಣಗೊಂಡು ೫೦ ವರ್ಷ ಪೂರೈಸಿದ ರಾಜ್ಯೋತ್ಸವದ ಸಂಭ್ರಮ ಹೊಸತನದ ಕಾರ್ಯಕ್ರಮಗಳೊಂದಿಗೆ ಸಿಹಿ ನೀಡಿ ಆಚರಿಸೋಣ. ರಾಜ್ಯೋತ್ಸವ ಸರ್ಕಾರಿ ಆಚರಣೆಗೆ ಸೀಮಿತವಾಗದೇ ನೆಲದ ಹಬ್ಬವಾಗಿ ಎಲ್ಲರೂ ಸಂಭ್ರಮಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್-೨ ತಹಸೀಲ್ದಾರ ಸಿ.ಜಿ ನಾಯ್ಕ, ಸ್ಕೌಟ್ಸ್ & ಗೈಡ್ಸ್ ಪ್ರಮುಖ ನಂದನ ಬಾಳಗಿ, ಭಾರತ ಸೇವಾದಳ ಪ್ರಮುಖ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ, ಯಲ್ಲಾಪುರ ಲಯನ್ಸ್ ಅಧ್ಯಕ್ಷ ಸುರೇಶ್ ಬೋರಕರ್, ಕ.ಸಾಪ ಕಾರ್ಯದರ್ಶಿ ಜಿ.ಎನ್ ಭಟ್ಟ ತಟ್ಟಿಗದ್ದೆ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಪ್ರಮುಖ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಉಪಸ್ಥಿತರಿದ್ದು ಕಾರ್ಯಕ್ರಮದ ಪೂರ್ವಸಿದ್ಧತೆ ಬಗ್ಗೆ ಚರ್ಚಿಸಿದರು.

