

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿ ಸೊಬಗು, ಕಣ್ಮನ ತಣಿಸುವ ಬೆಡಗು, ಹಚ್ಚಹಸಿರಿನ ಕಾನನ ಜಲಪಾತಗಳ ನರ್ತನ ಮಳೆಗಾಲದಲ್ಲಿ ಉತ್ತರ ಕನ್ನಡ ನೋಡಲು ಬಲು ಸುಂದರ ಅದರಲ್ಲು ಯಲ್ಲಾಪುರ ತಾಲೂಕಿನ ಸಾತೋಡ್ಡಿ, ಮಾಗೋಡು ಶಿರ್ಲೆ, ಗಣೇಶ್ ಪಾಲ್ , ಇನ್ನಿತರ ಜಲಪಾತಗಳು ನೋಡಲು ಮನಮೋಹಕವಾಗಿರುತ್ತದೆ.
ತಾಲ್ಲೂಕಿನ ಜಲಪಾತಗಳಲ್ಲಿ ಅತ್ಯಂತ ಜನಪ್ರಿಯವಾದ ಪ್ರವಾಸಿಗರ ನೆಚ್ಚಿನ ಜಲಪಾತಗಳಲ್ಲಿ ಸಾತೊಡ್ಡಿ ಮತ್ತು ಮಾಗೋಡು ಅಗ್ರಸ್ಥಾನ ಪಡೆದ ಜಲಪಾತಗಳಾಗಿವೆ.

ಮಾಗೋಡು ಜಲಪಾತ ದೂರದಿಂದಲೇ ನೋಡಿ ಆನಂದಿಸಬಹುದಾಗಿದೆ. ಹಸಿರು ಪ್ರಕೃತಿಯ ನಡುವೆ ಮಳೆಗಾಲದಲ್ಲಿ ಕೆಂಪು ನೀರಿನಿಂದಲೂ ನಂತರ ದಿನಗಳಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆ ನೋಡುಗರ ಕಣ್ಮನ ತಣಿಸುತ್ತದೆ. ಮಾಗೋಡಿನ ಸುತ್ತಮುತ್ತಲ ಗುಡ್ಡ, ಕಾನನ, ಮಂಜುಮುಸುಕಿದ ಮೋಡಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬಹು ಆಳದಲ್ಲಿ ಜಲಪಾತದ ನೀರಿನ ಮೊರೆತ ಮೇಲ್ನಿಂತು ನೋಡುವ ಪ್ರವಾಸಿಗರ ಎದೆ ಜಲ್ಲೆನಿಸುವಂತಿದೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಜಲಪಾತ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾತೊಡ್ಡಿ ಜಲಪಾತ ಬಲುಪ್ರಿಯವಾದ ಜಲಪಾತವಾಗಿದ್ದು ಜಲಪಾತದ ನೀರಲ್ಲಿ ಮಕ್ಕಳು, ಹಿರಿಯರು ಮಹಿಳೆಯರು ಹತ್ತಿರದಿಂದ ನೋಡಬಹುದಲ್ಲದೇ ಆಟವಾಡಬಹುದಾಗಿದೆ ಈ ಕಾರಣದಿಂದ ಬೇರೆಲ್ಲಾ ಜಲಪಾತಗಳಿಗಿಂತ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
ಇಲ್ಲಿನ ಉಸ್ತುವಾರಿ ಯನ್ನು ಗ್ರಾಮ ಅರಣ್ಯ ಸಮಿತಿ ಮತ್ತು ದೇಹಳ್ಳಿ ಪಂಚಾಯತ್ ನೊಡಿಕೊಳ್ಳುತ್ತಿದ್ದು ಜಲಪಾತ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇದಿಸಲಾಗಿದೆ. ಜಲಪಾತದ ಸನಿಹಕ್ಕೆ ತಿನ್ನುವ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಮಳೆ ಪ್ರಮಾಣ ಹೆಚ್ಚಾದಂತೆಲ್ಲಾ ಪ್ರವಾಸಿಗರ ಸಂಖ್ಯೆಯು ಹೆಚ್ಚುತ್ತಾ ಸಾಗುತ್ತದೆ. ಪಸಕ್ತವರ್ಷ ಮುಂಗಾರು ತಡವಾಗಿ ಪ್ರಾರಂಭವಾಗಿದ್ದು ಕಳೆದೆರಡು ದಿನಗಳ ವರೆಗೆ ಹೇಳುವಷ್ಟು ಮಳೆ ಸುರಿದಿಲಿಲ್ಲ ಸೋಮವಾರದಿಂದ ಮಳೆ ಪ್ರಮಾಣ ಹೆಚ್ಚುತ್ತಿದ್ದು ನದಿ ನೀರಿನಲ್ಲಿ ಏರಿಕೆ ಕಂಡಿದೆ ಪರಿಣಾಮ ಬೋರ್ಗರೆದು ದುಮ್ಮಿಕ್ಕುವ ಜಲಪಾತಗಳೆಲ್ಲ ಸೌಮ್ಯತೆ ಮಾಯವಾಗಿ ರುದ್ರ ರಮಣೀಯವಾಗಿದೆ.
ರಾಜ್ಯದ ವಿವಿಧ ಬಾಗಗಳಿಂದ ಪ್ರವಾಸಿಗರು ಪ್ರತಿವರ್ಷ ಲಕ್ಷಾಂತರ ಮಂದಿ ಜಲಪಾತಗಳಿಗೆ ಭೇಟಿ ಕೊಡುವುದರಿಂದ ಒಂದಷ್ಟು ಆರ್ಥಿಕ ಚಟುವಟಿಕೆಗೆ ಅನುಕೂಲವಾಗಲಿದೆ. ಇದೇ ಸ್ಥಳಗಳನ್ನು ಮತ್ತಷ್ಟು ಅಭಿವೃದ್ದಿ ಪಡಿಸಿದರೆ ಅದೇ ಉದ್ಯಮವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಪ್ರವಾಸಿಗರಿಗೆ ಮನೋಲ್ಲಾಸವಾದರೆ ಇಲ್ಲಿನ ಕೆಲವರಿಗೆ ಬದುಕಾಗಲಿದೆ ಸರ್ಕಾರ ಪ್ರವಾಸೋದ್ಯಮದಕಡೆ ಗಮನ ಹರಿಸಬೇಕಿದೆ.
ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸದ್ಯ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಸಾತೊಡ್ಡಿಯವರೆಗೆ ಮಧ್ಯದಲ್ಲಿ 4 ಕಿ.ಮೀ ಹೊರತುಪಡಿಸಿ ಉತ್ತಮ ರಸ್ತೆಯಿದೆ. ಇದರಿಂದ ಪ್ರವಾಸಿಗರು ಸಂತೋಷದಿಂದ ಸಾತೊಡ್ಡಿ ಪ್ರವೇಶಿಸುತ್ತಾರೆ. ಜಲಪಾತದ ಪ್ರಾಂತ್ಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಆಕಸ್ಮಿಕ ಅವಘಡಗಳು ಸಂಭವಿಸದರೆ ತಕ್ಷಣಕ್ಕೆ ಧಾವಿಸುವ 6 ಜನರ ರಕ್ಷಣಾ ತಂಡ ಸನ್ನದ್ಧವಾಗಿರುತ್ತದೆ. ಇಲ್ಲಿ ನೆಟ್ವರ್ಕ್ ಇಲ್ಲದ ಕಾರಣ 6 ವಾಕಿಟಾಕಿಗಳನ್ನು ರಕ್ಷಣಾ ತಂಡದ ಸದಸ್ಯರಿಗೆ ನೀಡಲಾಗಿದೆ. ಮತ್ತು ನೀರಿನಲ್ಲಿ ಆಕಸ್ಮಿಕ ಕಾಲುಜಾರಿ ಬಿದ್ದವರನ್ನು ರಕ್ಷಿಸಲು ಬೇಕಾದ ಸಲಕರಣೆಗಳನ್ನು ಸಜ್ಜುಗೊಳಿಸಲಾಗಿದೆ. ಒಟ್ಟಿನಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಿದ್ದು ಗ್ರಾಮ ಅರಣ್ಯ ಸಮಿತಿಯಿಂದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. – ನಾರಾಯಣ ಭಟ್ ಕಂಚನಗದ್ದೆ , ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ]


Prathidvani Yellapura