
ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲೇ ವಿಶಿಷ್ಟ ಯುಗಾದಿ ಆಚರಣೆಗೆ ಹೆಸರಾದ ಯಲ್ಲಾಪುರದ ಯುಗಾದಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ತನ್ನಿಮಿತ್ತ ಪಟ್ಟಣದಲ್ಲಿ ಯುಗಾದಿ ಉತ್ಸವದ “ಜಾಗೃತಿ ಬೈಕ್ ರ್ಯಾಲಿ” ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕಾಳಮ್ಮ ದೇವಸ್ಥಾನದ ಆವಾರದಿಂದ ಪ್ರಾರಂಭವಾದ ಬೈಕ್ ರ್ಯಾಲಿಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ , ಯುವನಾಯಕ ವಿವೇಕ ಹೆಬ್ಬಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಸದಸ್ಯರಾದ ಸೋಮೇಶ್ವರ ನಾಯ್ಕ, ಆದಿತ್ಯಾ ಗುಡಿಗಾರ, ಪ್ರಮುಖರಾದ ಪ್ರಕಾಶ್ ಹೆಗಡೆ, ರಾಮು ನಾಯ್ಕ, ರಜತ್ ಬದ್ದಿ, ನವೀನ್ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಹಿಳೆಯರು ಯುವತಿಯರು ವಿಶೇಷವಾಗಿ ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಮ್ಮ ಸೈಕಲ್ ಗಳಿಗೆ ಕೇಸರಿ ಪತಾಕೆಯನ್ನು ಕಟ್ಟಿಕೊಂಡು ಜೈ ಶ್ರೀ ರಾಮ್ ಜಯಘೋಷ ಮೊಳಗಿಸುತ್ತ ಬೈಕ್ ರ್ಯಾಲಿಯಲ್ಲಿ ಸಾಗಿದರು.

ಕಳೆದ ಬಾರಿಗಿಂತ ಈ ಬಾರಿ ತೆರೆದ ಜೀಪುಗಳು ಕಾರುಗಳು ರ್ಯಾಲಿಯಲ್ಲಿ ಹೆಚ್ಚಾಗಿ ಕಂಡುಬಂದವು. ಚಿತ್ರ ವಿಚಿತ್ರ ಸದ್ದಿನೊಂದಿಗೆ ಪಟ್ಟಣದಾದ್ಯಂತ ಸಂಚರಿಸಿ ನೋಡುಗರ ಗಮನ ಸೆಳೆಯಿತು.

ಸಂಜೆ ವೇಳೆಗೆ ಚಾಲನೆಯಾದ ಬೈಕ್ ರ್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಸಮಾಪ್ತಿಗೊಂಡಿತು. ಸಾವಿರಕ್ಕೂ ಅಧಿಕ ಬೈಕುಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಕೇಸರಿ ಪತಾಕೆ, ಕೇಸರಿ ಶಲ್ಯ, ಊರ ತುಂಬಾ ಕೇಸರಿ ತೋರಣ, ಭಾರತ ಮಾತೆ, ಶ್ರೀರಾಮ, ಶಿವಾಜಿ ನಾಮಕ್ಕೆ ಜಯಘೋಷ ಹಾಕುತ್ತಾ ಸಾಗಿದರು. ಒಟ್ಟಿನಲ್ಲಿ ಕೇಸರಿಮಯ ರಂಗಿನಲ್ಲಿ ಹೊಸ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಯಲ್ಲಾಪುರ ಸಜ್ಜಾಗಿದೆ
ಜಾಹಿರಾತು ನೀಡಿ ಯಲ್ಲಾಪುರ ನೆಲದ ಪ್ರತಿಧ್ವನಿ ಪ್ರೋತ್ಸಾಹಿಸಿ


Prathidvani Yellapura