
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಮೇ 10 ರಂದು ರಾಜ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ಬುಧವಾರ 5 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಾ,ನಾಗೇಶ್ ನಾಯ್ಕ ಕಾಗಾಲ , ಗಾಲಿ ಜನಾರ್ದನ ರೆಡ್ಡಿ ಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಸಂತೋಷ್ ರಾಯ್ಕರ್, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಮಂಜುನಾಥ ಲವಾ ಕುಲಮಕರ , ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆ.ಆರ್.ಎಸ್) ಪಕ್ಷದಿಂದ ಮಂಜುನಾಥ ಈರವಿ ಶಿರಟ್ಟಿ , ಪಕ್ಷೇತರ ಅಭ್ಯರ್ಥಿಯಾಗಿ ಚಿದಾನಂದ ಹೆಚ್ ಹರಿಜನ್ ಸೇರಿ ಒಟ್ಟು ಐದು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.


ಜೆ.ಡಿ.ಎಸ್ ನ ನಾಗೇಶ್ ನಾಯ್ಕ ಕಾಗಾಲ ಪತ್ನಿ ಪುಷ್ಪಾ ನಾಗೇಶ್ ನಾಯ್ಕ ಜೊತೆಯಲ್ಲಿ ಹಲವು ಪ್ರಮುಖರೊಂದಿಗೆ ನಾಮಪತ್ರ ಸಲ್ಲಿಸಿದರು. ಕೆ.ಆರ್.ಪಿ.ಪಿ ಯ ಸಂತೋಷ್ ರಾಯ್ಕರ್ ತಮ್ಮ ಪತ್ನಿ ಆಶಾ ರಾಯ್ಕರ ಜೊತೆಯಲ್ಲಿ ಹಿತೈಷಿಗಳೊಂದಿಗೆ ನಾಮಪತ್ರ ಸಲ್ಲಿಸಿದರೆ ಉಳಿದ ಮೂವರು ಅಭ್ಯರ್ಥಿಗಳು ತಮ್ಮ ಕೆಲವೇ ಮಂದಿ ಹಿತೈಷಿಗಳೊಡನೆ ಬಂದು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ನಾಮ ಪತ್ರ ಸ್ವೀಕರಿಸಿದರು ತಹಶಿಲ್ದಾರ ಗುರುರಾಜ್ ಸ್ಥಳದಲ್ಲಿ ಉಪಸ್ಥಿತರಿದ್ದರು.
ಇದುವರೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು 9 ಅಭ್ಯರ್ಥಿಗಳಿಂದ 14 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ದಿನ ಬಾಕಿ ಇದ್ದು ಇನ್ನೆಷ್ಟು ನಾಮಪತ್ರಗಳು ಸಲ್ಲಿಕೆಯಾಗಲಿದೆ ಕಾದು ನೋಡಬೇಕಿದೆ.

ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದು ರಾಜ್ಯದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಶೂನ್ಯವಾಗಿದೆ. ಕೆಲವೇ ತಿಂಗಳುಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದ ಎಚ್.ಡಿ ಕುಮಾರಸ್ವಾಮಿ ನೀಡಿದ ಅನೆಕ ಜನಪರ ಯೋಜನೆಗಳು ಒಂದು ಪ್ರಾದೇಶಿಕ ಪಕ್ಷದ ಪ್ರಾಮುಖ್ಯತೆಯನ್ನು ರಾಜ್ಯದ ಜನರಿಗೆ ತಿಳಿಸಿಕೊಟ್ಟಿದೆ. ಜನತಾ ಜಲಧಾರೆ, ಪಂಚರತ್ನ ಯೋಜನೆಗಳು ಅತ್ಯಂತ ಪ್ರಮುಖವಾಗಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಬೇಕಿದೆ. ಇದರಿಂದ ಸಾಮಾನ್ಯರ ಬದುಕು ಹಸನಾಗಿ ರಾಜ್ಯವು ಆರ್ಥಿಕ ಪ್ರಗತಿಯತ್ತ ಸಾಗಲಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಆಯ್ಕೆ ಅನಿವಾರ್ಯವಾಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನತೆ ಆಶೀರ್ವದಿಸಲಿದ್ದಾರೆ. – ಡಾ. ನಾಗೇಶ ನಾಯ್ಕ ಕಾಗಾಲ, ಜೆಡಿಎಸ್ ಅಭ್ಯರ್ಥಿ

ರಾಜ್ಯದಲ್ಲಿ ಬದಲಾವಣೆಯ ಪರ್ವ ಎಲ್ಲಾ ಪಕ್ಷಗಳಲ್ಲೂ ಕಂಡು ಬರುತ್ತಿದ್ದು ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಪಣ ತೊಟ್ಟಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿಯವರ ಭವಿಷ್ಯದ ಚಿಂತನೆ ಸುವರ್ಣ ಕರ್ನಾಟಕ ನಿರ್ಮಾಣದ ಕನಸಾಗಿದೆ. ಸದ್ಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾರಾಟವಾಗಿದ್ದು ಜೆಡಿಎಸ್ನ ಹಲವು ನಾಯಕರು ನನ್ನೊಂದಿಗಿದ್ದಾರೆ. ಜನರ ಆಶೀರ್ವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿದ್ದು ನನ್ನ ಗೆಲುವು ಶತಸಿದ್ಧ. – ಸಂತೋಷ ರಾಯ್ಕರ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿ

ರಾಜ್ಯದ ಜನತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲರ ಆಡಳಿತ ವೈಖರಿ ಕಂಡಿದ್ದಾರೆ. ಶಿಕ್ಷಣ, ಆರೋಗ್ಯ, ಸಾರಿಗೆ, ವಿದ್ಯುತ್ ಇನ್ನೂ ಹಲವು ವಿಭಾಗಗಳಲ್ಲಿ ಸಾರ್ವಜನಿಕರಿಗೆ ಹೊರೆಯಾಗದಂತೆ ಬದುಕು ಸುಲಲಿತವಾಗಿಸಿ ಜನಪರ ಆಡಳಿತ ನೀಡುತ್ತಿರುವುದರಿಂದ ಜನತೆಯ ಒಲವು ಆಮ್ ಆದ್ಮಿ ಪಕ್ಷದ ಪರ ಇದೆ. ಪ್ರಜ್ಞಾವಂತ ಜನತೆ ಬದಲಾವಣೆ ಬಯಸುತ್ತಿದ್ದು ನನ್ನ ಆಯ್ಕೆ ಖಚಿತ. – ಮಂಜುನಾಥ ಲವಾ ಕುಲಮೇಕರ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ

ರಾಜ್ಯದ ಅಭಿವೃದ್ಧಿ ಆಗಬೇಕಾದರೆ ಮೊದಲು ಭ್ರಷ್ಟಾಚಾರ ತೊಲಗಬೇಕಿದೆ. ಮತ್ತು ಅಧಿಕಾರ ಕೇಂದ್ರೀಕೃತವಾಗುತ್ತಿರುವ ವ್ಯವಸ್ಥೆ ಬದಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಭ್ರಷ್ಟಾಚಾರದ ವಿರುದ್ಧ ಗಟ್ಟಿಧ್ವಿನಿಯಲ್ಲಿ ಹೋರಾಟ ನಿರತರಾದ ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟಿçÃಯ ಸಮಿತಿ(ಕೆಆರ್ಎಸ್) ಮನೆಮಾತಾಗಿದ್ದು ಈ ಬಾರಿ ಯಲ್ಲಾಪುರ ಕ್ಷೇತ್ರದ ಜನತೆ ಒಲವು ತೋರಲಿದ್ದಾರೆ. ಮಂಜುನಾಥ ಈರವಿ ಶಿರಟ್ಟಿ, ಕೆಆರ್ಎಸ್ ಪಕ್ಷದ ಅಭ್ಯರ್ಥಿ
Prathidvani Yellapura