
ಶ್ಯಾಮಲಾ ನಾಗೇಶ್……
ಪ್ರತಿಧ್ವನಿ,ಯಲ್ಲಾಪುರ –ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಹಲವು ವರ್ಷಗಳಿಂದ ಎರಡು ಪಾಳುಬಿದ್ದ ಕೊಠಡಿಗಳಿದ್ದು ಗಿಡಗಂಟಿಗಳು ಬೆಳೆದದ್ದಲ್ಲದೆ ಹಾವು ಚೇಳುಗಳ ವಾಸಸ್ಥಾನದಂತಾಗಿದೆ. ಇತ್ತೀಚೆಗೆ ಪಾಳುಬಿದ್ದ ಕೊಠಡಿಯೊಳಗೆ ಅನೈತಿಕ ಚಟುವಟಿಕೆಗಳು ನಡೆಯುವ ಬಗ್ಗೆ ಕೇಳಿ ಬರುತ್ತಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.

ಕಳೆದ 20 ವರ್ಷಗಳ ಹಿಂದೆ ಉರ್ದು ಅಂಗನವಾಡಿಯಾಗಿ ಬಳಕೆಯಾಗುತ್ತಲಿದ್ದ ಕೊಠಡಿಗಳು ನಂತರದ ದಿನಗಳಲ್ಲಿ ಬಂದ್ ಮಾಡಲಾಗಿದ್ದು ಕೊಠಡಿಯ ಕೆಲವು ಹೆಂಚುಗಳು ಮಂಗಮಾಯವಾಗಿ ಮಳೆಗಾಲದಲ್ಲಿ ನೀರೆಲ್ಲಾ ಒಳ ಸುರಿದು ಗಬ್ಬೆದ್ದು ನಾರುತ್ತದೆ. ಕೊಠಡಿಯ ಒಳಗು ಹೊರಗು ಬೃಹದಾಕಾರದಲ್ಲಿ ಗಿಡಗಂಟಿಗಳು ಬೆಳೆದು ನೋಡಲು ಭಯಾನಕವಾಗಿ ಕಂಡುಬರುತ್ತದೆ.

ಶಾಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಓದುತ್ತಿದ್ದು ಆಟದ ವೇಳೆ ತಮಗರಿವಿಲ್ಲದೆ ಈ ಸ್ಥಳಕ್ಕೆ ಬಂದಾಗ ವಿಷಕಾರಿ ಹಾವು ಚೇಳುಗಳಿಂದ ಅಪಾಯವಾದರೆ ಹೊಣೆ ಯಾರು ? ಎಂಬುದು ಹಲವರ ಪ್ರಶ್ನೆಯಾಗಿದೆ.

ಇರುವ ಅಲ್ಪಸ್ವಲ್ಪ ಸರ್ಕಾರಿ ಸ್ವತ್ತು ಈ ರೀತಿ ಪಾಳುಬಿದ್ದು ಪ್ರಯೋಜನಕ್ಕೆ ಬಾರದೆ ವ್ಯರ್ಥವಾದರೆ ಹೇಗೆ. ಇದರ ಸದ್ಬಳಕೆ ಮಾಡಿಕೊಂಡು ಪುಟ್ಟದಾದ ಮಕ್ಕಳ ಗ್ರಂಥಾಲಯ ಮಾಡಿದರೆ ಸದ್ಬಳಕೆಯಾಗಲಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಪಾಳುಬಿದ್ದ ಎರಡು ಕೊಠಡಿಗಳು ಹಲವು ವರ್ಷಗಳಿಂದ ಇದೇರೀತಿ ಇದ್ದು ಮಕ್ಕಳು ಈ ಭಾಗಕ್ಕೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೊಠಡಿಯ ಬಾಗಿಲು ಹಾಳಾಗಿರುವುದು ಹೆಂಚುಗಳು ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿರಬಹುದಾಗಿದೆ. ಈ ಕುರಿತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಲೆಯ ಸಹ ಶಿಕ್ಷಕ ಗಂಗಾಧರ ಪಟಗಾರ್ ಹೇಳಿದರು.
ಜಾಹಿರಾತು ನೀಡಿ ಯಲ್ಲಾಪುರ ನೆಲದ ” ಪ್ರತಿಧ್ವನಿ” ಪ್ರೋತ್ಸಾಹಿಸಿ


Prathidvani Yellapura