




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಬಡವರ, ಶ್ರಮಿಕರ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಿಗೆ ಆಸರೆಯಾಗಿ ನಿಲ್ಲಬಲ್ಲ ಏಕೈಕ ಪಕ್ಷ ಕಾಂಗ್ರೆಸ್. ಅದು ಬಡವರ ಭಾವನೆಗಳನ್ನು ಮತ್ತು ಬದುಕಿನ ಸಂಕಷ್ಟಗಳನ್ನು ಅರಿತು ಸ್ಪಂದಿಸುತ್ತದೆ ಹೊರತು ಧರ್ಮ, ಜಾತಿ, ಅಂತಸ್ತಿನ ಆಧಾರದಲ್ಲಿ ಎಂದಿಗೂ ರಾಜಕಾರಣ ಮಾಡಿದ್ದಿಲ್ಲ. ಇಂತಹ ಕುಟಿಲ ರಾಜಕಾರಣ ಬಿಜೆಪಿಗೆ ಒಲಿದಿದೆ. ರಾಜ್ಯದ ಜನತೆ ಸತ್ಯ ಮತ್ತು ಸುಳ್ಳನ್ನು ಅವಲೋಕಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಆಶೀರ್ವದಿಸಿದ್ದಾರೆ. ನುಡಿದಂತೆ ನಡೆದಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಸರಳ, ಸಜ್ಜನಿಕೆಯ , ಸಂಸ್ಕಾರವಂತ ಹೆಣ್ಣುಮಗಳು ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಪ್ರಚಂಡ ಬಹುಮತದಿಂದ ಚುನಾಯಿಸಲಿದ್ದಾರೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ ಭಟ್ಟ ಮೆಣಸುಮನೆ ಹೇಳಿದರು.

ಅವರು ಪಟ್ಟಣದ ಮಂಜುನಾಥ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೊಟ್ಟ ಮಾತಿಗೆ ತಪ್ಪದೇ ದಿಟ್ಟ ಹೆಜ್ಜೆ ಇಟ್ಟು ಜನತೆಯ ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರ ನೀಡಿದ ಮಾತಿನಂತೆ ೫ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಅಲ್ಲದೆ ಅದರ ಸಾಧಕ ಬಾಧಕಗಳ ಮೇಲೆ ಜವಾಬ್ದಾರಿ ನೀಡಲು ಅನುಷ್ಠಾನ ಸಮಿತಿಗಳನ್ನು ರಚಿಸಿದೆ. ಇದು ಜನತೆಗೆ ಕಾಂಗ್ರೆಸ್ ಕೊಟ್ಟ ಬದ್ದತೆಯ ಕಾರ್ಯ. ಬಡವರಿಗೆ ನೀಡುವ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎನ್ನುವ ಬಿಜೆಪಿ ಮನಸ್ಥಿತಿ ಬಡವರು, ರೈತರು, ಕಾರ್ಮಿಕರು, ಮಹಿಳೆಯರ ವಿರೋಧಿ ಮನಸ್ಥಿತಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷದಿಂದ ಗ್ಯಾರಂಟಿ ಘೋಷಣೆಯಾಗಿದ್ದು ಅನುಷ್ಠಾನ ಶತಸಿದ್ಧ ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಿ.ಎನ್ ಗಾಂವ್ಕರ್ ಹೇಳಿದರು.


ಕಾಂಗ್ರೆಸ್ ಪಕ್ಷದ ಪರ ಮತಯಾಚಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ನಗರ ಘಟಕ ಪ್ರಮುಖ ರವಿಚಂದ್ರ ನಾಯ್ಕ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್ ಭಟ್ಟ, ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಮುಶ್ರತ್ ಶೇಖ, ಪ.ಪಂ ಮಾಜಿ ಅಧ್ಯಕ್ಷ ಎಂ.ಡಿ ಮುಲ್ಲಾ, ಮಂಜುನಾಥ ನಗರ ವಾರ್ಡ್ ಸದಸ್ಯ ಸತೀಶ್ ಶಿವಾನಂದ ನಾಯ್ಕ, ಪ್ರಮುಖರಾದ ಜಿ.ವಿ ಭಟ್ಟ, ಜಾನಿ ಅಲ್ಫಾನ್ಸೋ, ರೊಜಾರಿಯೋ, ವಂದನಾ ಭಟ್ಟ, ಬಿಂದು ನಾಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Prathidvani Yellapura