Breaking News

42 ವರ್ಷಗಳ ಹಿಂದಿನ ಪ್ರಕರಣ ಬೇಧಿಸಿ ತಾರ್ಕಿಕ ಅಂತ್ಯ ಹಾಡಿದ ಯಲ್ಲಾಪುರ ಪೊಲೀಸರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : 1982ರಲ್ಲಿ ದಾಖಲಾಗಿದ್ದ ಕಳ್ಳತನದ ಪ್ರಕರಣವೊಂದು 42 ವರ್ಷಗಳ ನಂತರ ಆನಗೋಡು ಜನಸ್ನೇಹಿ ವಾಟ್ಸಪ್ ಗುಂಪಿನ ಸಹಾಯದಿಂದ ತಾರ್ಕಿಕ ಅಂತ್ಯ ಕಂಡಿದ್ದು ಪ್ರಕರಣ ಹಳೆಯದಾದರೂ ಕಾನೂನು ತನ್ನ ಕಾರ್ಯ ನಿರ್ವಹಿಸದೇ ಬಿಡುವುದಿಲ್ಲ ಎಂಬುದಕ್ಕೆ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ಸಾಕ್ಷಿಯಾಗಿದೆ.


ವಿವರ : ತಾಲೂಕಿನ ತಟಗಾರ ನಿವಾಸಿ ನಾರಾಯಣ ವೆಂಕಟರಮಣ ಭಟ್ಟ ಎಂಬುವರು 01-04-1982 ರಲ್ಲಿ ತಮ್ಮ ಮನೆಯಲ್ಲಿನ ಕಬ್ಬಿಣದ ಗಾಣ ಕಳುವಾಗಿದೆ ಎಂದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿ ಪ್ರಕರಣದ ಬೆನ್ನತ್ತಿ ಕಬ್ಬಿಣದ ಗಾಣ ಕದ್ದ ಓರ್ವ ಕಳ್ಳನನ್ನು ಬಂಧಿಸಿ ಗಾಣ ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಕಳ್ಳ ಪರಾರಿಯಾಗಿದ್ದನು. ಆತನನ್ನು ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ.


ಆದರೆ ಇತ್ತೀಚಿನ ದಿನಗಳಲ್ಲಿ ಮೇಲಾಧಿಕಾರಿಗಳ ಮುಂದಾಲೋಚನೆ ಮತ್ತು ನಿರ್ದೇಶನದಿಂದ ಪೊಲೀಸ್‌ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿಸಿ ಪ್ರತಿ ಬೀಟಿನ ವ್ಯಾಪ್ತಿಗೆ ಸಂಬಂಧಿಸಿದಂತೆ ವಾಟ್ಸ್ಅಪ್ ಗ್ರೂಪ್ ರಚಿಸಿದ್ದು ಅದರಲ್ಲಿ ಕಬ್ಬಿಣ ಗಾಣದ ಕಳುವಿನ ಪ್ರಕರಣದ ಕುರಿತು ಪರಾರಿಯಾಗಿದ್ದ ಕಳ್ಳನ ವಿವರವನ್ನು ಗುಂಪಿನಲ್ಲಿ ಹಂಚಿಕೊಳ್ಳಲಾಗಿತ್ತು. ಗುಂಪಿನಲ್ಲಿದ್ದ ಹಿರಿಯರು ಸಣ್ಣ ಸಣ್ಣ ಸೂಕ್ಷ್ಮ ವಿಚಾರಗಳನ್ನು ತಿಳಿಸುತ್ತಾ ಹೋದಂತೆ ಯಲ್ಲಾಪುರ ಪೊಲೀಸರು ಹೈ ಅಲರ್ಟ್ ಆದರು.

ಪ್ರಕರಣ ಬೇಧಿಸಲು ಮುಂದಾದ ಯಲ್ಲಾಪುರ ಕ್ರಿಯಾಶೀಲ ಪಿಐ ರಮೇಶ ಹಾನಾಪುರ ತಂಡವೊಂದನ್ನು ರಚಿಸಿದರು. ಆನಗೋಡಿಗೆ ಸಂಬಧಿಸಿದ ಜನಸ್ನೇಹಿ ಪೊಲೀಸ್ ಬೀಟಿನ ವಾಟ್ಸಪ್ ಗುಂಪಿನಲ್ಲಿ ಬಂದ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರ ತಂಡ ಗೋವಾಕ್ಕೆ ತೆರಳಿತು. ಮಾಹಿತಿ ಕಲೆ ಹಾಕಿದ ಪ್ರಕಾರ ಪೊಲೀಸರಿಗೆ ಬೇಕಾಗಿದ್ದ ಕಳ್ಳ , ಕಾರ್ಮೋಟಾ ಗೋವಾದಲ್ಲಿರುವ ಮಾಹಿತಿ ತಿಳಿದು ಆತನ ಮನೆ ಪತ್ತೆಹಚ್ಚಲಾಯಿತು.


ಮನೆಗೆ ತೆರಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಪ್ರಕರಣಕ್ಕೆ ಬೇಕಾಗಿದ್ದ ಕಳ್ಳ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಕುರಿತು ಕುಟುಂಬದವರು ಮಾಹಿತಿ ನೀಡಿದರು. ನಂತರ ಆತನ ಮರಣ ಪ್ರಮಾಣಪತ್ರ ಪಡೆದು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡು ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.


ಒಟ್ಟಿನಲ್ಲಿ ಎಷ್ಟೇ ದೀರ್ಘಕಾಲದ ಪ್ರಕರಣವಾದರೂ ಕಾನೂನು ತನ್ನ ಕೆಲಸ ನಿರ್ವಹಿಸದೇ ಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಯಿತು. ಅಲ್ಲದೇ ಪೊಲೀಸರು-ಸಾರ್ವಜನಿಕರ ನಡುವಿನ ಸಂಬಂಧ ಕಾನೂನು ಸುವ್ಯವಸ್ಥೆಗೆ ಸಹಕಾರಿಯಾಗಿ ಕೆಲವು ಕ್ಲಿಷ್ಟಕರ ಪ್ರಕರಣಗಳನ್ನೂ ಬೇಧಿಸಲು ಸಹಕಾರಿಯಾಗುತ್ತದೆ ಎಂಬುದಕ್ಕೆ ಯಲ್ಲಾಪುರ ಪೊಲೀಸರ ಜನಸ್ನೇಹಿ ಸಿದ್ಧಾಂತ ಸಹಕಾರಿಯಾಗಿದೆ. ಆಯಾ ಬೀಟ್ ವ್ಯವಸ್ಥೆಯಲ್ಲಿ ವಾಟ್ಸಪ್ ಗುಂಪು ರಚಿಸಿರುವುದರಿಂದ ಕಾನೂನು ಪ್ರಕ್ರಿಯೆಗೆ ಅತ್ಯಂತ ಸಹಕಾರಿಯಾಗುತ್ತಿದೆ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದ್ದು ಈ ಪ್ರಕರಣದಿಂದ ಯಲ್ಲಾಪುರ ಪೊಲೀಸರ ಯೋಜನೆ ಮತ್ತು ಯೋಚನೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಿಗೂ ಮಾದರಿಯಾಗಬಲ್ಲದಾಗಿದೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ.


ಇತ್ತೀಚಿನ ವರ್ಷಗಳಲ್ಲಿ ಕಾನೂನು ವ್ಯವಸ್ಥೆ ಸಾರ್ವಜನಿಕರೊಂದಿಗೆ ಸ್ನೇಹಮಯವಾಗಿದ್ದು ಜನರ ಅನಿಸಿಕೆ ಅಭಿಪ್ರಾಯಗಳಿಗೂ ಗೌರವಿಸುತ್ತಾ ಪಾಲಿಸುವ ನಿಯಮಗಳನ್ನು ತಿಳಿಸುತ್ತಾ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಸದಾ ಕ್ರಿಯಾಶೀಲರಾಗಿರುವ ಯಲ್ಲಾಪುರ ಪೊಲೀಸರ ಕಾರ್ಯ ತತ್ಪರತೆ ಶ್ಲಾಘನೀಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಎಂತಹ ಪ್ರಕರಣವಾಗಲೀ ಕಾನೂನಿನ ಕಣ್ತಪ್ಪಿಸಲು ಸಾಧ್ಯವಿಲ್ಲ. ಪ್ರಕರಣದ ಅಂತ್ಯ ಕೊಂಚ ತಡವಾಗಬಹುದೇ ಹೊರತು ನ್ಯಾಯಯುತ ಕೊನೆ ಎಂದಿಗೂ ಶತಸಿದ್ಧ. ಸುಮಾರು ೪೨ವರ್ಷಗಳ ಹಿಂದೆ ದಾಖಲಾಗಿದ್ದ ಕಳ್ಳತನದ ಪ್ರಕರಣದಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದರೂ ಪೊಲೀಸ್ ಬೀಟ್ ಜನಸ್ನೇಹಿ ವಾಟ್ಸಪ್ ಗುಂಪಿನ ಸಹಾಯದಿಂದ ಗುಂಪಿನಲ್ಲಿರುವ ಹಿರಿಯರು ನೀಡಿದ ಸುಳಿವಿನ ಆಧಾರದಲ್ಲಿ ಪರಾರಿಯಾದ ವ್ಯಕ್ತಿಯ ಮಾಹಿತಿ ದೊರೆತು ಇನ್ನೂ ಜೀವಂತವಾಗಿದ್ದ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಾರ್ವಜನಿಕರ ಸಹಕಾರ ಇಂತಹ ಯಶಸ್ಸಿಗೆ ಕಾರಣವಾಗಿದೆ. – ರಮೇಶ್ ಹಾನಾಪುರ,ಪಿಐ ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *