
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ – ಆರತಿ ಬೈಲ ಕ್ರಾಸ್ ಹತ್ತಿರದ ಹಳ್ಳದ ನೀರು ಕಲುಷಿತಗೊಂಡಿದ್ದು, ನೊರೆ ತುಂಬಿ ಹರಿಯುತ್ತಿದೆ. ಇದ್ದಕ್ಕಿದ್ದಂತೆ ಈ ರೀತಿಯಾದಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದ್ದು ಮತ್ತೊಂದು ಮಾದರಿಯನ್ನು ಗ್ರಾಮ ಪಂಚಾಯತನಿಂದ ಕಾರವಾರಕ್ಕೆ ಕೂಡಲೇ ಪರೀಕ್ಷೆಗಾಗಿ ರವಾನಿಸಲಾಗಿದೆ.

ಕಾರಣ ಇಡಗುಂದಿ, ಗರವಾಸ, ಚಿನ್ನಾಪುರ, ದೋಣಗಾರ ಇನ್ನಿತರೆ ಗ್ರಾಮದ ಸಾರ್ವಜನಿಕರು ಈ ನೀರನ್ನು ಮನುಷ್ಯರಿಗೆ ಆಗಲಿ ಅಥವಾ ಪ್ರಾಣಿಗಳಿಗಾಗಲಿ ಯಾವುದೇ ರೀತಿಯ ಬಳಕೆಗೆ ಸದ್ಯದ ಪರಿಸ್ಥಿತಿಯಲ್ಲಿ ಬಳಸಬಾರದೆಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ವಿನಂತಿಸಿದ್ದಾರೆ.

ಮಾಹಿತಿ ದೊರೆತ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ವಿ. ಎಲ್. ಶಿರೂರ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ, ಪರುಶರಾಮ ಡೊಣುರ, ಸಮುದಾಯ ಆರೋಗ್ಶಾಧಿಕಾರಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಚನ್ನವೀರಪ್ಪಾ ಕಂಬಾರ ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಮಾದರಿ ಸಂಗ್ರಹಿಸಿದರು.