
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ, ಯಲ್ಲಾಪುರ- ಇತಿಹಾಸದಲ್ಲಿ ಇಂದೆಂದು ಕಂಡರಿಯದ ಜನಸಾಗರ ಉತ್ತರ ಕನ್ನಡ ಜಿಲ್ಲೆಯಲ್ಲಿಯೆ ಈ ಪ್ರಮಾಣದ ಜನಸಾಗರದ ನಡುವೆ ಅಭ್ಯರ್ಥಿ ಒಬ್ಬರು ನಾಮಪತ್ರ ಸಲ್ಲಿಕೆ ಮಾಡಿದ ದಾಖಲೆಗಳಿಲ್ಲ. ಮಂಗಳವಾರ ಯಲ್ಲಾಪುರ ತುಂಬಾ ಜನಸಾಗರ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರಬೈಲ್ ಶಿವರಾಮ ಹೆಬ್ಬಾರ್ 5 ನೇ ಬಾರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ಯಲ್ಲಾಪುರದ ಶಕ್ತಿಮಾತೆ ಗ್ರಾಮದೇವಿ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು, ಹಿತೈಷಿಗಳು, ಹಿರಿಯರು ಹಾಗೂ ಕಾರ್ಯಕರ್ತರೊಂದಿಗೆ ನಾಮಪತ್ರಕ್ಕೆ ಪೂಜೆ ಸಲ್ಲಿಸಿದರು.


ನಂತರ ದೇವಸ್ಥಾನದ ಆವರಣದಿಂದ ಡೊಳ್ಳು, ಝಾಂಜ್, ಸಿದ್ದಿ ಸಮುದಾಯದ ಸಾಂಪ್ರದಾಯಿಕ ನೃತ್ಯ ಮೆರವಣಿಗೆಯ ರಂಗು ಹೆಚ್ಚಿಸಿತ್ತು.


ಜನರೆ ನನ್ನ ಪಂಚಪ್ರಾಣ ಎನ್ನುವ ಹೆಬ್ಬಾರ್ ಮುಂಡಗೋಡು, ಬನವಾಸಿ ಹಾಗೂ ಯಲ್ಲಾಪುರದ ಜನಸ್ತೋಮದ ನಡುವೆ ವಿಶೇಷವಾಗಿ ಸಿದ್ಧಪಡಿಸಿದ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಸಾಗಿ ಡಿ.ಟಿ ರಸ್ತೆ ಮಾರ್ಗವಾಗಿ ಗಾಂಧಿ ಚೌಕ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಬೆಲ್ ರಸ್ತೆಯಲ್ಲಿ ಸಾಗಿ ನೂತನ ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.


ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ ಶಿವರಾಮ ಹೆಬ್ಬಾರ್ ಜೊತೆಯಲ್ಲಿ ಪತ್ನಿ ವನಜಾಕ್ಷಿ ಹೆಬ್ಬಾರ್, ಪುತ್ರ ವಿವೇಕ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮುಂಡಗೋಡು, ಬನವಾಸಿ, ಯಲ್ಲಾಪುರ ಭಾಗದ ಮುಖಂಡರು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ ಸದಸ್ಯರು, ಪದಾಧಿಕಾರಿಗಳು, ಪ.ಪಂ ಸದಸ್ಯರು, ವಿವಿಧ ಮೋರ್ಚಾಗಳ ಪ್ರಮುಖರು ಜೊತೆಯಲ್ಲಿದ್ದರು.

ಮೂರು ಪ್ರತಿಗಳಿಗೂ ಪ್ರತ್ಯೇಕವಾಗಿ ಜಿ.ಎನ್ ಗಾಂವ್ಕರ್, ದ್ಯಾಮಣ್ಣ ದೊಡ್ಡಮನಿ, ಶಿವಕುಮಾರ ಗೌಡ ಸೂಚಕರಾಗಿ ಸಹಿ ಹಾಕಿದರು.ಚುನಾವಣಾಧಿಕಾರಿಯಾಗಿ ಅಜ್ಜಪ್ಪ ಸೊಗಲದ ನಾಮಪತ್ರ ಸ್ವೀಕರಿಸಿದರು. ತಹಶಿಲ್ದಾರ ಗುರುರಾಜ್ ಸ್ಥಳದಲ್ಲಿ ಉಪಸ್ಥಿತರಿದ್ದರು.

ಚುನಾವಣೆಯನ್ನು ನೀತಿಯ ಆಧಾರದಲ್ಲಿ ಎದುರಿಸುತ್ತಿದ್ದೇನೆ. ಅಭಿವೃದ್ಧಿ ನಮ್ಮ ಮೂಲ ಮಂತ್ರ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಇದ್ದ ಅಧಿಕಾರವನ್ನೂ ತೊರೆದು ರಾಜೀನಾಮೆ ನೀಡಿ ಮತ್ತೊಮ್ಮೆ ಜನರ ಆಶೀರ್ವಾದಕ್ಕಾಗಿ ಉಪಚುನಾವಣೆ ಎದುರಿಸಿ 31 ಸಾವಿರಕ್ಕು ಅಧಿಕ ಮತಗಳ ಅಂತರದಿಂದ ಜಯಗಳಿಸಿ ಸಚಿವನಾಗಿ ಜನರ ಸೇವೆ ಸಲ್ಲಿಸಿದ್ದೇನೆ. ಅವರ ಅಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದ್ದು ಈ ಬಾರಿ 55 ಸಾವಿರಕ್ಕು ಅಧಿಕ ಮತಗಳ ಅಂತರದಿಂದ ಜಯಗಳಿಸಲಿದ್ದೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರಬೈಲ್ ಶಿವರಾಮ ಹೆಬ್ಬಾರ್ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.


Prathidvani Yellapura