




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ , ಅಕಾಡಮಿ ಪ್ರಾಧಿಕಾರಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು ಯಲ್ಲಾಪುರ ತಾಲೂಕಿನ ಮಂಚೀಕೇರಿ ಸಮೀಪದ ಅಣಲೇಸರ ಗ್ರಾಮದ ಡಾ.ಗೀತಾ ಸಿದ್ದಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದೆ.

ತಾಲೂಕಿನ ಮಂಚೀಕೇರಿ ಗ್ರಾ.ಪಂ ವ್ಯಾಪ್ತಿಯ ಅಣಲೇಸರ ಗ್ರಾಮದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಪರಶುರಾಮ ಗಿರಿಗೋಲಿ ಸಿದ್ದಿ ಪುತ್ರಿಯಾದ ಡಾ.ಗೀತಾ ಸಿದ್ದಿ ಈ ಹಿಂದೆ ಪಿಎಚ್ಡಿ ಪದವಿ ಪಡೆದು ಕರ್ನಾಟಕ ರಾಜ್ಯ ಜಾನಪದ ವಿವಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ನೀನಾಸಂ ತಂಡದ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದವರು.


ದುನಿಯಾ ವಿಜಯ್ ಅಭಿನಯದ ಸಲಗ ಚಲನಚಿತ್ರದ ಟಿಣಿಂಗ ಮಿಣಿಂಗ ಟಿಷ್ಯಾ ಗೀತೆಯೊಂದಿಗೆ ರಾಜ್ಯ ಖ್ಯಾತಿಗಳಿಸಿದ್ದರು. ಅಕ್ಕ ಗಿರಿಜಾ ಸಿದ್ದಿಯೂ ಸಹ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ತಾಲೂಕಿನ ಹೆಮ್ಮೆಯ ಪುತ್ರಿಯರಾಗಿದ್ದಾರೆ.

ಸದ್ಯ ನಾಟಕ ಅಕಾಡಮಿಯಲ್ಲಿ ಸದಸ್ಯ ಸ್ಥಾನ ದೊರೆತಿರುವುದು ಉತ್ತರಕನ್ನಡ ಜಿಲ್ಲೆಗೆ ಸಂದ ಗೌರವವಾಗಿದೆ. ವಿಶೇಷವಾಗಿ ಯಲ್ಲಾಪುರ ತಾಲೂಕಿಗೆ ಹೆಮ್ಮೆ ತಂದಿದೆ.

ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ಎಂಎಲ್ಸಿ ಶಾಂತಾರಾಂ ಸಿದ್ದಿ, ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ, ಜಿ.ಪಂ ಮಾಜಿ ಸದಸ್ಯ ವಿಜಯ್ ಮಿರಾಶಿ, ರಂಗ ಸಹ್ಯಾದ್ರಿ ಪ್ರಮುಖ ಡಿ.ಎನ್ ಗಾಂವ್ಕರ ಹಾಗೂ ಇನ್ನಿತರ ಪ್ರಮುಖರು ಅಭಿನಂದಿಸಿದ್ದಾರೆ.