

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಶ್ರೀರಾಮನ ತಾರಕ ಮಂತ್ರ ಪ್ರತಿ ಮನೆಗಳಲ್ಲಿ ಮಾರ್ದನಿಸಬೇಕು. ಪ್ರತಿ ಮನಗಳಲ್ಲಿ ಪ್ರಭು ಶ್ರೀರಾಮನ ಆದರ್ಶಗಳು ಮನೆಮಾಡಬೇಕಿದೆ . ತನು, ಮನ ಶುದ್ಧಿಯ ಜೊತೆಯಲ್ಲಿ ಪರಿಸರ ಸ್ವಚ್ಛತೆ ಅತ್ಯವಶ್ಯಕವಾಗಿದ್ದು ಯಲ್ಲಾಪುರದ ಶ್ರದ್ಧಾಕೇಂಧ್ರಗಳ ಸುತ್ತಮುತ್ತಲ ಪರಿಸರದ ಸ್ವಚ್ಛತೆಗೆ ಮುಂದಾಗಬೇಕಿದೆ. ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ದಿನವನ್ನು ಚಿರಸ್ಥಾಯಿಯಾಗಿಸಲು ಸರ್ವ ಹಿಂದೂಗಳೂ ಮುಂದಾಗಬೇಕಿದೆ ಎಂದು ನಿಶ್ಚಲಾನಂದ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಅಡಿಕೆಭವನದಲ್ಲಿ ಅಯೋಧ್ಯೆಯಿಂದ ಬಂದ ಪವಿತ್ರ ಅಕ್ಷತೆಯ ಕುಂಡಗಳನ್ನು ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರವೂ ಸೇರಿದಂತೆ ಘಟ್ಟದ ಮೇಲಿನ ನಾಲ್ಕು ತಾಲೂಕುಗಳಿಗೆ ನೀಡಿ ಆಶೀರ್ವಚನ ನೀಡಿದರು.

ಕ್ಷೇತ್ರ ಪ್ರಾಂತ ಪ್ರಮುಖ್ ಬಸವರಾಜ್ ಮಾತನಾಡಿ ; ನೂರಾರು ವರ್ಷಗಳ ಸುಧೀರ್ಘ ಹೋರಾಟದ ನಂತರ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣಗೊಂಡು 2024 ರ ಜ.22 ಕ್ಕೆ ಲೋಕಾರ್ಪಣೆಯಾಗುತ್ತಿದೆ. ಈ ಶುಭಸಂದರ್ಭಕ್ಕೆ ಭರತಖಂಡದ ಸಕಲ ಹಿಂದೂಗಳಿಗೆ ಪವಿತ್ರ ಅಕ್ಷತೆ ನೀಡಿ ಆಹ್ವಾನಿಸುವ ಮಹಾ ಸಂಕಲ್ಪಕ್ಕೆ ಮುನ್ನುಡಿ ಬರೆಯುತ್ತಿದ್ದು ಪ್ರತಿ ಹಿಂದೂಗಳ ಮನೆಗೂ ಅಕ್ಷತೆ ತಲುಪಿಸಿ ಆಹ್ವಾನ ಪತ್ರಿಕೆ ನೀಡಿ ಗೌರವದಿಂದ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಯುವ ಜವಾಬ್ದಾರಿ ನಮ್ಮ ಮೇಲಿದ್ದು ಅತ್ಯಂತ ಕಟ್ಟುನಿಟ್ಟಿನಿಂದ ನಿಭಾಯಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಗಣಪತಿ ಹಿರೇಸರ, ವಿ.ಹಿಂ.ಪ ಪ್ರಮುಖರಾದ ಎಸ್.ಎನ್ ಭಟ್ಟ ಏಕಾನ, ಗಂಗಾಧರ ಭಟ್ಟ ಹಾಗೂ ದೋಂಡು ಪಾಟೀಲ ಉಪಸ್ಥಿತರಿದ್ದರು.
Prathidvani Yellapura