


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸ್ವಂತ ಜಮೀನು ಹೊಂದಿರದೆ ಆರ್ಥಿಕವಾಗಿ ಸಹಕಾರ ಸಿಗದೆ ತಮ್ಮ ಕಾಯಕದ ಸಲುವಾಗಿ ಸರಿಯಾದ ಸಾಲ ಸೌಲಭ್ಯ ಸಿಗದ ಸಂದರ್ಭದಲ್ಲಿ ಧನಗರ ಗೌಳಿ ಸಮಾಜದ ಅಭ್ಯುದಯಕ್ಕಾಗಿ ಉದಯಿಸಿದ ಆರ್ಥಿಕ ಸಂಸ್ಥೆ ಉನ್ನತಿ ಗೌಳಿ ಕ್ರೆಡಿಟ್ ಕೋ ಆಪ್ ಸೊಸೈಟಿ 26 ವರ್ಷ ಪೂರ್ಣಗೊಳಿಸಿ 27 ನೆ ವರ್ಷಕ್ಕೆ ಕಾಲಿಟ್ಟಿದೆ. ಇದೀಗ ನೂತನ ಕಟ್ಟಡದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸಲಿದ್ದು ಶಾಸಕ ಶಿವರಾಮ್ ಹೆಬ್ಬಾರ್ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಾಕು ಸೋನು ಕೋಕ್ರೆ ಹೇಳಿದರು.

ಅವರು ಪಟ್ಟಣದ ನೌಕರರ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಉನ್ನತಿ ಗೌಳಿ ಕ್ರೆಡಿಟ್ ಕೋ-ಆಪ್ ಸೊಸೈಟಿ ನೂತನ ಕಟ್ಟಡದ ಉದ್ಘಾಟನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

1997ರಲ್ಲಿ ಪುಟ್ಟ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಉನ್ನತಿ ಗೌಳಿ ಸೊಸೈಟಿ ಇದೀಗ 26 ವರ್ಷ ಪೂರೈಸಿದ್ದು ಪ್ರಸ್ತುತ 4086 ಶೇರು ಸದಸ್ಯರನ್ನು ಹೊಂದಿದ್ದು 1ಕೋಟಿ 75 ಲಕ್ಷ ಶೇರು ಬಂಡವಾಳ ಹೊಂದಿದೆ. 2 ಕೋಟಿ 29 ಲಕ್ಷ ನಿಧಿಗಳು, 25 ಕೋಟಿ 13:ಲಕ್ಷ ಠೇವಣಿಗಳನ್ನು ಹೊಂದಿದೆ. 29 ಕೋಟಿ 66 ಲಕ್ಷ ರೂ ಸದಸ್ಯರಿಗೆ ಸಾಲ ವಿತರಿಸಲಾಗಿದೆ. 22 ಲಕ್ಷ 4೦ ಸಾವಿರ ಸ್ಥಿರಾಸ್ತಿ ಹಾಗೂ 43 ಲಕ್ಷ 37 ಸಾವಿರದ ಚರಾಸ್ತಿಯನ್ನು ಹೊಂದಿದೆ. 29 ಕೋಟಿ 17 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು ವರ್ಷದಿಂದ ವರ್ಷಕ್ಕೆ ಉತ್ತಮ ಲಾಭದಲ್ಲೇ ಮುಂದುವರೆಯುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 31 ಲಕ್ಷ 25 ಸಾವಿರ ರೂ ಲಾಭ ಗಳಿಸಿದ್ದು ಅಡಿಟ್ ವರ್ಗೀಕರಣದಲ್ಲಿ ‘ಅ’ ಶ್ರೇಣಿ ಪಡೆದಿದೆ. ಜಿಲ್ಲೆಯಲ್ಲಿ 3 ಶಾಖೆಗಳನ್ನು ಹೊಂದಿದ್ದು ಸಂಸ್ಥೆ ಉತ್ತಮ ದಿಸೆಯಲ್ಲಿ ಸಾಗುತ್ತಿದೆ. ಇದೀಗ 4 ಗುಂಟೆ ಸ್ವಂತ ಸ್ಥಳದಲ್ಲಿ 45 ಲಕ್ಷ ವೆಚ್ಛದಲ್ಲಿ ಕಟ್ಟಡ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.

ಭದ್ರತಾ ಕೊಠಡಿಯನ್ನು ಡಾ. ಸುರೇಶ್ ಗೌಡ, ಸಹಕಾರ ಸಂಘಗಳ ನಿಬಂಧಕರು, ಬೆಳಗಾವಿ ಉದ್ಘಾಟಿಸಲಿದ್ದು ಸಂಸ್ಥೆಯ ಲಾಂಚನವನ್ನು ಕಾರವಾರದ ಸಹಕಾರ ಸಂಘಗಳ ಉಪನಿಬಂಧಕ ಮಂಜುನಾಥ ಸಿಂಗ್ ಅನಾವರಣಗೊಳಿಸಲಿದ್ದಾರೆ. ಆಡಳಿತ ಸಭಾಭವನವನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸ್ಥಳೀಯ ಮುಖಂಡ ವಿಜಯ್ ಮಿರಾಶಿ ಉದ್ಘಾಟಿಸಲಿದ್ದಾರೆ ಎಂದು ಉನ್ನತಿ ಗೌಳಿ ಕ್ರೆಡಿಟ್ ಕೋ-ಆಪ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ರೇಖು ಸೋನು ಕೋಕ್ರೆ ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬೀರು ಅಂಬ್ರು ಹುಂಬೆ , ನಿರ್ದೇಶಕರಾದ ಗಂಗು ದೋಂಡು ಪಾಟೀಲ, ಕೊಂಡು ಬಾಬು ಕೋಕ್ರೆ ಹಾಗೂ ಸಂಸ್ಥೆಯ ಸಿಬ್ಬಂದಿ ಬಾಬು ಬಿ ಖರಾತ್ ಉಪಸ್ಥಿತರಿದ್ದರು.