

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಸರ್ಕಾರ ಭಾರತ ನ್ಯಾಯ ಸಂಹಿತೆ ಅಡಿಯಲ್ಲಿ ಹಿಟ್ ಅಂಡ್ ರನ್ ಅಪರಾಧಕ್ಕೆ ಹೊಸದಾಗಿ ಕಾಯ್ದೆ ಜಾರಿಗೊಳಿಸಿದ್ದು ಇದರ ಅನ್ವಯ ಚಾಲಕ ಮತ್ತು ಮಾಲಿಕರಿಗೆ ಕಂಟಕವಾಗುವಷ್ಟು ಕಾಯ್ದೆ ಅಪಾಯವಿದ್ದು ತಕ್ಷಣದಿಂದ ರದ್ದು ಗೊಳಿಸುವಂತೆ ಯಲ್ಲಾಪುರ ತಾಲೂಕಿನ ಲಾರಿ ಮಾಲಕರ ಸಂಘದ ವತಿಯಿಂದ ವಿವಿಧ ಸಂಘಟನೆಗಳು ಹಾಗು ಚಾಲಕರು ಸೇರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸುವ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ ಕೇಂದ್ರ ಸರ್ಕಾರ ತಂದಿರುವ ಕಾಯ್ದೆ ಚಾಲಕರ ಜೀವನಕ್ಕೆ ಕಷ್ಟ ತಂದೊಡ್ಡಲಿದೆ. ಅಪಘಾತವು ಆಕಸ್ಮಿಕದಲ್ಲಿ ನಡೆದುಹೋಗುವಂತದ್ದು ಅದಕ್ಕಾಗಿ ಚಾಲಕನಿಗೆ 5 ರಿಂದ 10 ವರ್ಷ ಸೆರೆವಾಸ 7 ಲಕ್ಷ ದಂಡ ಅತ್ಯಂತ ಸಂಕಷ್ಟವಾಗಲಿದೆ. ಈಗಾಗಲೆ ದೇಶಾದ್ಯಂತ ಮುಷ್ಕರ ಪ್ರಾರಂಭವಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಮತ್ತು ಟ್ರಾನ್ಸ್ಪೋರ್ಟ್ ಇಲಾಖೆ ಕಾರ್ಯದರ್ಶಿಗಳು ಈ ಕಾಯ್ದೆ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ ನಾನು ಸಹ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಜೊತೆಗಿದ್ದರು.

ನಂತರ ಪ್ರತಿಭಟನಾ ನಿರತರು ಕೇಂದ್ರ ಸರ್ಕಾರದ ಕಾನೂನಿನ ವಿರುದ್ದ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ತಹಶಿಲ್ದಾರ್ ಅವರಿಗೆ ಮತ್ತು ಆರಕ್ಷಕ ಇಲಾಖೆಗೆ ಮನವಿ ಸಲ್ಲಿಸಿದರು.

ತಹಶಿಲ್ದಾರರ ಅನುಪಸ್ಥಿತಿಯಲ್ಲಿ ಗ್ರೇಡ್ 2 ತಹಶಿಲ್ದಾರ್ ಸಿ.ಜಿ.ನಾಯ್ಕ್ ಮನವಿ ಸ್ವೀಕರಿಸಿದರು.

ಆರಕ್ಷಕ ಠಾಣೆಯಲ್ಲಿ ಪಿಎಸ್ಐ ಗಳಾದ ನಸ್ರೀನ್ ತಾಜ್ ಮತ್ತು ನಿರಂಜನ್ ಹೆಗಡೆ ಉಪಸ್ಥಿತಿಯಲ್ಲಿ ಪಿ.ಎಸ್.ಐ ಸಿದ್ದುಗುಡಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಲಾರಿ ಮಾಲಿಕರ ಸಂಘದ ಅಧ್ಯಕ್ಷ ನಾಗೇಂದ್ರ ಭಟ್ ಕವಾಳೆ, ಸಾಮಾಜಿಕ ಹೋರಾಟಗಾರ ಸಂತೋಷ್ ನಾಯ್ಕ್,ಸಂಘಟನೆಯ ಪ್ರಮುಖರು. ಲಾರಿ ಮಾಲಕರು ಚಾಲಕರು ಆಟೋ ಮಾಲಕರು ಚಾಲಕರು, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮಾಲಕ ಸಂಘ, ಭಗತ್ ಸಿಂಗ್ ಆಟೋ ಚಾಲಕ ಮಾಲಕರ ಸಂಘ ಮತ್ತು ಗ್ರಾಮದೇವಿ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿ ಮೆರವಣಿಗೆಯಲ್ಲಿ ಪಾಲ್ಗೊಂಡರು.


