


ಯಲ್ಲಾಪುರ : ಸುಡು ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಭುವಿಗೆ ಮೇ 15 ರಂದು ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ ತಂಪನ್ನುಂಟು ಮಾಡಿದ್ದಲ್ಲದೇ ಅವಘಡಗಳನ್ನೂ ಸೃಷ್ಠಿಸಿದೆ.

ಪಟ್ಟಣದ ಪ್ರತಿಷ್ಠಿತ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲಾ ಕಟ್ಟಡದ ಮೇಲೆ ದೊಡ್ಡ ಗಾತ್ರದ ಕಾಡುಜಾತಿ ಮರ ಬಿದ್ದು ಎರಡು ಕೊಠಡಿಗಳಿಗೆ ಬಾರೀ ಪ್ರಮಾಣದಲ್ಲಿ ಹಾನಿಯಾಗಿದೆ.

ಕಟ್ಟಡದ ಹಿಂಬದಿಯ ಶೌಚಾಲಯಕ್ಕೂ ಹಾನಿಯಾಗಿದೆ.

ಮರ ಬಿದ್ದ ರಭಸಕ್ಕೆ ಕಟ್ಟಡದ ದೊಡ್ಡ ದೊಡ್ಡ ಮರದ ತೊಲೆಗಳು ತುಂಡಾಗಿ ಕೊಠಡಿಯೊಳಗೆ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್ ಮೇಲೆ ಬಿದ್ದಿದೆ. ಶಾಲೆಗಳಿನ್ನೂ ಪ್ರಾರಂಭವಾಗದ ಕಾರಣ ವಿದ್ಯಾರ್ಥಿಗಳಾರೂ ಕೊಠಡಿಯೊಳಗೆ ಇರದಿರುವುದು ಅದೃಷ್ಟವೆಂದೇ ಹೇಳಬಹುದಾಗಿದೆ.

ವಿಷಯ ತಿಳಿದ ಆಡಳಿತ ಮಂಡಳಿ ಪ್ರಮುಖರು, ಕಂದಾಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.




