





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಬಸವೇಶ್ವರ ವೃತ್ತದಿಂದ ಐ.ಬಿ ಕಡೆಸಾಗುವ ರಸ್ತೆ ದಿನದಿಂದ ದಿನಕ್ಕೆ ಸಂಚಾರ ಕಂಟಕ ರಸ್ತೆಯಾಗಿ ಪರಿಣಮಿಸುತ್ತಿದೆ. ಮೊದಲು ಈ ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿತ್ತು ಆದರೆ ಕ್ರಮೇಣ ಗಟಾರ ನಿರ್ಮಿಸಿ ರಸ್ತೆ ವಿಶಾಲ ಮಾಡಿದ್ದರು ಸಂಚಾರ ದುಸ್ತರವಾಗುತ್ತಿದೆ. ಪ್ರಮುಖವಾಗಿ ಈ ರಸ್ತೆಯಲ್ಲಿ ಕಾರುಗಳ ಪಾರ್ಕಿಂಗ್ ಹೆಚ್ಚಾಗಿದೆ ಅಲ್ಲದೆ ವೆಂಕಟರಮಣ ಮಠದಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯುವ ಹಿನ್ನೆಲೆಯಲ್ಲಿ ಅತಿಥಿಗಳ ಕಾರುಗಳು ಐ.ಬಿ ರಸ್ತೆ ಎರಡುಬದಿಯಲ್ಲಿ ಸಾಲಾಗಿ ನಿಲ್ಲುವುದರಿಂದ ಮತ್ತು ಐ.ಬಿ ಹತ್ತಿರದಲ್ಲಿ ವಿ.ಆರ್.ಎಲ್ ಸಾರಿಗೆ ಸಂಸ್ಥೆಯ ಕಚೇರಿ ಇದ್ದು ಅಲ್ಲಿ ಸರಕು ಇಳಿಸುವ ಸಾಗಿಸುವ ಮತ್ತು ಬಸ್ ವ್ಯವಸ್ಥೆ ಇರುವುದರಿಂದ ದಡೂತಿ ಬಸ್ ಗಳು ರಸ್ತೆ ಬದಿಯಲ್ಲೆ ನಿಲ್ಲಿಸಿಟ್ಟಿರುವುದು ಕೂಡ ಈ ರಸ್ತೆಯ ಸಂಚಾರ ದುಸ್ತರವಾಗಿದೆ.

ಐ.ಬಿ ಎಸ್ತೆಯು ಬಹಳ ಪ್ರಮುಖವಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಜನಪ್ರತಿನಿಧಿಗಳು ಅಧಿಕಾರಿಗಳು ಯಲ್ಲಾಪುರ ಅಥವಾ ಕಾರವಾರ ಭೇಟಿಗೆ ಬಂದಾಗ ಉಳಿದುಕೊಳ್ಳುವ ಐ.ಬಿ , ತಾಲೂಕು ಸರ್ಕಾರಿ ಆಸ್ಪತ್ರೆ, ಲೋಕೋಪಯೋಗಿ ಯಲ್ಲಾಪುರ ವಿಭಾಗದ ಕಚೇರಿ, ಜಿಲ್ಲಾ ಪಂಚಾಯತ ಇಂಜನಿಯರಿಂಗ್ ಉಪ ವಿಭಾಗದ ಕಚೇರಿ, ಸಣ್ಣ ನೀರಾವರಿ ಇಲಾಖೆ, ಮೀನುಗಾರಿಕಾ ಇಲಾಖೆ, ಕಾರ್ಮಿಕ ಭವನ , 579 G+2 ಮಾದರಿ ಮನೆಗಳ ಹೆಬ್ಬಾರ್ ನಗರ ಹಾಗು ಮಂಜುನಾಥನಗರ, ಕೊಂಡೇಮನೆ ಗಳಿಗೆ ತೆರಳಬೇಕಾದ ಅತ್ಯಂತ ಪ್ರತಿಷ್ಟಿತ ಬಹುಪಯೋಗಿ ರಸ್ತೆ ಇದಾಗಿದ್ದು ಸಂಚಾರಕ್ಕೆ ಸಂಚಕಾರವಾಗುತ್ತಿರುವುದು ದುರಂತವಾಗಿದೆ.

ಈ ಕೂಡಲೆ ಪೊಲೀಸ್ ಇಲಾಖೆ, ಪಟ್ಟಣ ಪಂಚಾಯತದವರು ಗಮನ ಹರಿಸಿ ರಸ್ತೆ ಎರಡುಬದಿ ದೊಡ್ಡ ಗಾತ್ರದ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಕೆ ನೀಡಬೇಕಿದೆ ಮತ್ತು ಬಸವೇಶ್ವರ ವೃತ್ತದಲ್ಲಿ ಇಷ್ಟು ಪ್ರಮಾಣದ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದ ಕಾರಣ ಕನಿಷ್ಟ ಐ.ಬಿ ರಸ್ತೆಯಲ್ಲಿ ನಿಲ್ಲುಸುವ ವಾಹನ ಒಂದೇಬದಿ ನಿಲ್ಲಿಸಿದರೆ ಇತರೆ ವಾಹನ ಸಂಚಾರಕ್ಕೆ ಸಹಕಾರಿಯಾಗಲಿದೆ ಮತ್ತು ದಿನಪೂರ್ತಿ ರಸ್ತೆ ಬದಿ ನಿಲ್ಲಿಸುವ ವಾಹನಗಳನ್ನು ಐ.ಬಿ ಬಳಿ ಇರುವ ಉದ್ಯಾನವನದ ಪಕ್ಕದ ರಸ್ತೆಯಲ್ಲಿ ನಿಲ್ಲಿಸುವಂತೆ ಸೂಚಿಸಬೇಕಿದೆ. ಒಟ್ಟಿನಲ್ಲಿ ಇರುವ ಕೊಂಚ ಸ್ಥಳವಾದರು ಸಂಚಾರಕ್ಕೆ ಸಮರ್ಪವಾಗಿಸಿಕೊಳ್ಳಬೇಕಿದೆ ಎಂಬುದು ಹಲವು ನಾಗರಿಕರ ಅಭಿಪ್ರಾಯವಾಗಿದೆ.


