





ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಸಾಂಸ್ಕೃತಿಕ ರಂಗ ಮಾತ್ರವಲ್ಲದೇ ಶೈಕ್ಷಣಿಕ, ಆದ್ಯಾತ್ಮ, ಕೃಷಿ ಇನ್ನಿತರೆ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿ ಸಾವಿರಾರು ಶಿಷ್ಯವೃಂದವನ್ನು ಹೊಂದಿ ಜನಮಾನಸದಲ್ಲಿ ಮೇರು ವ್ಯಕ್ತಿತ್ವದ ಸ್ಥಾನಕ್ಕೆ ಏರಿರುವ ನಮ್ಮ ನಡುವೆಯೇ ಇದ್ದು ನಮ್ಮನ್ನೂ ಸೇರಿದಂತೆ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ಭವಿಷ್ಯದ ಪೀಳಿಗೆಗೆ ಉದಾಹರಣೆಯಾಗಿ ನಿಲ್ಲಬಲ್ಲ ಜಿ.ಟಿ ಭಟ್ಟ ಬೊಮ್ಮನಳ್ಳಿ ಅವರ 8೦ರ ಸಂಭ್ರಮ ಕಾರ್ಯಕ್ರಮವನ್ನು ಆಪ್ತವಲಯದ ಮುಖೇನ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಸಂಚಾಲಕ ಜಿ.ಎನ್ ಶಾಸ್ತ್ರಿ ಹೇಳಿದರು.

ಅವರು ಪಟ್ಟಣದ ಅಡಿಕೆ ಭವನದಲ್ಲಿ ಜಿ.ಟಿ. ಭಟ್ಟ ಬೊಮ್ಮನಳ್ಳಿ 8೦ರ ಸಂಭ್ರಮ ಕಾರ್ಯಕ್ರಮದ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.


ನಾಡಿನ ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಕರಾಗಲಿದ್ದಾರೆ. ಪ್ರಖ್ಯಾತ ಚಲನಚಿತ್ರ ಸಾಹಿತಿ ಜಯಂತ ಕಾಯ್ಕಿಣಿ ಬೊಮ್ಮನಳ್ಳಿ ಜಂಗಮ ಎಂಬ ಗೌರವ ಗ್ರಂಥ ಸಮರ್ಪಿಸಲಿದ್ದಾರೆ. ಅತಿಥಿಗಳಾಗಿ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಹೆಗ್ಗೋಡು, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಸಂಸ್ಕೃತ ವಿ.ವಿ ಕುಲಪತಿ ಡಾ.ಅಹಲ್ಯಾ ಶರ್ಮಾ ಭಾಗವಹಿಸುತ್ತಿದ್ದು ಹಾಸಣಗಿ ಸೊಸೈಟಿಯ ಅಧ್ಯಕ್ಷ ಆರ್.ಎನ್ ಹೆಗಡೆ ಗೊರ್ಸಗದ್ದೆ ಅಧ್ಯಕ್ಷತೆ ವಹಿಸಲಿದ್ದಾರೆ. ವಾಮನ ಚರಿತ್ರೆ ತಾಳಮದ್ದಲೆ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದು ಜಿ.ಟಿ ಭಟ್ಟ ಬೊಮ್ಮನಳ್ಳಿಯವರ ಪುತ್ರಿಯರಾದ ಡಾ.ಶೀಲಾ, ಉಷಾ, ವಿದ್ಯಾ, ಜ್ಯೋತಿ ಮಾಧ್ಯಮದವರಿಗೆ ವಿವರಿಸಿದರು.

ಹಿರಿಯ ಸಾಧಕ ಜಿ.ಟಿ ಭಟ್ಟ ಬೊಮ್ಮನಳ್ಳಿ 8೦ರ ಸಂಭ್ರಮದಲ್ಲಿ ಸಾಹಿತ್ಯ ,ಕೃಷಿ, ಶೈಕ್ಷಣಿಕ, ಸಹಕಾರಿ, ಆದ್ಯಾತ್ಮ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯಾತಿಗಣ್ಯರು ಭಾಗವಹಿಸುತ್ತಿದ್ದು ಊರ ನಾಗರೀಕರು , ಸಂಘ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಇಂತಹ ಸಾರ್ಥಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ , ವಾಸುಕಿ ಹೆಗಡೆ ಮಳಗೀಮನೆ, ಗಣೇಶ ರೋಖಡೆ, ಶ್ರೀಪಾದ ಭಟ್ಟ, ವಿಶ್ವನಾಥ ಭಾಮನಕೊಪ್ಪ ಕರೆ ನೀಡಿದರು.




