
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ಶಿಕ್ಷಕ ವಿದ್ಯಾರ್ಥಿಗಳಾದವರು ಸದಾ ಅಧ್ಯಯನಾಸಕ್ತರಾಗಿರಬೇಕು. ಬೇರೆಬೇರೆ ಸಾಮಾಜಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಲ್ಲಿ ಮಾನಸಿಕ ಶಿಸ್ತನ್ನು ರೂಪಿಸುವುದು, ಕ್ರಿಯಾಶಕ್ತಿ ಜಾಗೃತಗೊಳಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಯಬೇಕು. ಅದಕ್ಕೆ ಸ್ಕೌಟ್ಸ್ ಗೈಡ್ಸ್ ತರಬೇತಿಯಿಂದ ಮಕ್ಕಳ ವ್ಯಕ್ತಿತ್ವ ಬೆಳೆಸಲು ಸಹಾಯಕ ವಾಗುತ್ತದೆ ಎಂದು ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಆರ್.ಹೆಗಡೆ ಹೇಳಿದರು.
ಅವರು ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮತ್ತು ವಿಶ್ವದರ್ಶನ ಬಿ.ಇಡಿ ಕಾಲೇಜಿನ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಾರಂಭಿಕ ಮಾಹಿತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಚಾಲನೆ ನೀಡಿ ಮಾತನಾಡುತ್ತಿದ್ದರು.
`ಸದಾ ಜಾಗೃತಾವಸ್ಥೆಯಲ್ಲಿರು’ ಎಂಬ ಧ್ಯೇಯ ವಾಕ್ಯದ ಭಾರತ ಸ್ಕೌಟ್ಸ್ ಗೈಡ್ಸ್ ಸಮಾಜದ ವ್ಯಕ್ತಿಯು ತನ್ನ ಮೇಲಿರುವ ಅನೇಕ ಋಣಗಳನ್ನು ತೀರಿಸಲು, ಅವಶ್ಯಕತೆ ಇರುವಲ್ಲಿ ಸಹಾಯ ನೀಡಲು, ತ್ಯಾಗ, ನಿಷ್ಠೆಯ ಮೂಲಕ ಜಗತ್ತಿಗೆ ಮಾದರಿಯಾಗಲು ಸಹಾಯ ಮಾಡುತ್ತದೆ. ಆದ್ದರಿಂದ ತಾವು ವೃತ್ತಿ ಪ್ರಾರಂಭಿಸುವಾಗ ಇಂತಹ ತರಬೇತಿಗಳನ್ನು ಪಡೆದು ಮಕ್ಕಳನ್ನು ತರಬೇತು ಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಕೆ.ಗಾಂವ್ಕರ್ ಸಾಂದರ್ಭಿಕ ಮಾತನಾಡಿದರು.
ತಾಲೂಕಾ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ನಂದನ ಬಾಳಗಿ, ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಕಾರ್ಯದರ್ಶಿ ಸುಧಾಕರ ನಾಯಕ, ಜಿಲ್ಲಾ ಸಂಚಾಲಕ ವೀರೇಶ ಮಾದರ, ಮಹೇಶ ನಾಯ್ಕ, ಖೈರೂನ್ ಶೇಖ್, ಕಲಾವತಿ ಗೌಡ, ಗುರು ಬಂಟ, ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಪ್ರತಿಮಾ ನಿರ್ವಹಿಸಿದಳು. ನವೀನಕುಮಾರ ಎ.ಜಿ ಸ್ವಾಗತಿಸಿದರು. ಚಂದ್ರಶೇಖರ ಸಿ.ಎಸ್ ವಂದಿಸಿದರು.
ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ವಾರ್ಷಿಕ ಕಾರ್ಯ ಯೋಜನೆಯನ್ನು ಗಣ್ಯರು ಬಿಡುಗಡೆ ಗೊಳೀಸಿದರು.
Prathidvani Yellapura