
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಸರ್ಕಾರದ ನಿರ್ಧೇಶನದಂತೆ ಶಿಕ್ಷಣ ಇಲಾಖೆಯ ಆದೇಶದಂತೆ ರಾಜ್ಯದಾದ್ಯಂತ ಪ್ರಾಥಮಿಕ ಹಾಗು ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗೆ ಒತ್ತು ನೀಡುವ ಸಲುವಾಗಿ ಸಂಭ್ರಮದ ಶನಿವಾರ ಹೆಸರಿನಲ್ಲಿ ” ಬ್ಯಾಗ್ ರಹಿತ ದಿನ” ವಾಗಿ ತಿಂಗಳ ಮೂರನೆ ಶನಿವಾರ ಆಚರಿಸುತ್ತಿದ್ದು ಯಲ್ಲಾಪುರದ ಶಾಲೆಗಳಲ್ಲಿ ಸಂಭ್ರಮದ ಶನಿವಾರ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಪ್ರತಿ ತಿಂಗಳ ಮೂರನೆ ಶನಿವಾರ ಶಿಕ್ಷಣ ಇಲಾಖೆ ವಿಷಯ ಒಂದನ್ನು ನೀಡಿ ಬ್ಯಾಗ್ ರಹಿತ ಶಾಲಾದಿನ ಆಚರಿಸುವಂತೆ ಸೂಚಿಸಿದೆ ಈ ಪ್ರಕ್ರಿಯೆಯ ಮೊದಲ ಶನಿವಾರ ವಿದ್ಯಾರ್ಥಿಗಳಿಗೆ ” ನನ್ನ ಆರೋಗ್ಯ ನನ್ನ ಕೈಯಲ್ಲಿ ” ಎಂಬ ವಿಷಯ ನೀಡಿದ್ದು ಇದಕ್ಕೆ ಪೂರಕವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಪಟ್ಟಣದ ಹೋಲಿ ರೋಜರಿ ಪ್ರೌಡಶಾಲೆ 150 ವಿದ್ಯಾರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಪಟ್ಟಣದ ಆಡಳಿತ ಸೌಧ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಗ್ರಂಥಾಲಯ, ಅಂಚೆ ಕಚೇರಿ 6 ಕಡೆಗಳಿಗೆ 25 ವಿದ್ಯಾರ್ಥಿಗಳ ಗಪು ಮಾಡಿ ಭೇಟಿ ಮಾಡಿಸಿ ಅಲ್ಲಿನ ಎಲ್ಲಾ ವಿಚಾರಗಳನ್ನು ಮನದಟ್ಟಾಗುವಂತೆ ವಿವರಿಸಿದರು.

ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವೈಟಿಎಸ್ಎಸ್ ನಲ್ಲಿ ಬ್ಯಾಗ್ ರಹಿತ ದಿನ ವನ್ನು ಮಕ್ಕಳ ಸಂತೆಯಾಗಿ ಮಾರ್ಪಡಿಸಿ ಶಿಕ್ಷಕರು ಮಕ್ಕಳ ಸಂತೆಯಲ್ಲಿ ಕೊಳ್ಳುವ ಗ್ರಾಹಕರಾಗಿ ಪಾಲ್ಗೊಂಡು ವ್ಯಾಪಾರ ವಹಿಚಾಟಿನ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.

ಒಟ್ಟಿನಲ್ಲಿ ಸದಾ ಹೆಗಲಮೇಲೆ ಬಾರಿ ತೂಕದ ಬ್ಯಾಗ್ ಹೊರುವ ದೇಹಕ್ಕೆ ಶನಿವಾರ ರಿಲ್ಯಾಕ್ಸ್ ಇತ್ತು ಮತ್ತು ತಮ್ಮ ಸುತ್ತಮುತ್ತಲಿನ ವ್ಯವಸ್ಥೆಯಲ್ಲಿ ತಿಳಿದುಕೊಳ್ಳಬಹುದಾದ ಸಂಗತಿಗಳನ್ನು ತಿಳಿದಂತಾಯಿತು.
ಈ ಸಂದರ್ಭದಲ್ಲಿ ಆಯಾ ಇಲಾಖೆಯ ಮುಖ್ಯಸ್ಥರು ಸಿಬ್ಬಂದಿಗಳು ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸಿ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವಿದ್ಯಾರ್ಥಿಗಳ ಜೊತೆಯಲ್ಲಿ ಶಿಕ್ಷಕರು ಭಾಗಿಯಾಗಿ ಮಾರ್ಗದರ್ಶನ ಮಾಡಿದರು.
Prathidvani Yellapura