
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಸಹಜ, ವರ್ಗವಾದಾಗ ಮಾಡಿದ ಕೆಲಸಕ್ಕೆ ಸಲ್ಲುವ ಗೌರವವೇ ನಾಲ್ಕು ಜನರ ಶುಭನುಡಿಯ ಬೀಳ್ಕೊಡುಗೆಯಾಗಿದೆ. ನನ್ನ ವೃತ್ತಿ ಜೀವನದಲ್ಲಿ ಎಂದಿಗೂ ಕರ್ತವ್ಯಕ್ಕೆ ಬೆನ್ನು ತೋರಿಸಿದವನಲ್ಲ. ಹುಟ್ಟಿ ಬೆಳೆದು ಓದಿದ್ದು ಬಯಲುಸೀಮೆಯಾದರೂ ವೃತ್ತಿ ಬದುಕನ್ನು ಬಹುತೇಕ ಕಳೆದದ್ದು ಮಲೆನಾಡಿನ ಮಡಿಲಲ್ಲೇ.
ನಮ್ಮ ಕರ್ತವ್ಯ ನಿಷ್ಠ ಎಷ್ಟೇ ಇದ್ದರೂ ಸ್ಪಂದಿಸುವ ಜನ ಕ್ಷೇತ್ರದ ಶಾಸಕರು , ಸದಸ್ಯರು ಹೆಚ್ಚಿನದಾಗಿ ನನ್ನ ಸಹೋದ್ಯೋಗಿಗಳ ಸಹಕಾರ ಉತ್ತಮ ಅಧಿಕಾರಿ ಎನಿಸಿಕೊಳ್ಳಲು ಸಾಧ್ಯವಾಗಿದೆ. ಗ್ರಾಮದೇವಿಯ ಅನುಗ್ರಹದಿಂದ ಇದೆಲ್ಲಾ ಸಾಧ್ಯವಾಗಿದ್ದು ಸಮಸ್ತ ಜನತೆಗೆ ಋಣಿಯಾಗಿದ್ದೇನೆ ಎಂದು ವರ್ಗಾವಣೆಗೊಂಡ ಯಲ್ಲಾಪುರ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು.


ಅವರು ಪಟ್ಟಣ ಪಂಚಾಯತ ಸಭಾಭವನದಲ್ಲಿ ಪ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ನೂತನ ಮುಖ್ಯಾಧಿಕಾರಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜನರ ಪ್ರೀತಿ ಸದಸ್ಯರೊಂದಿಗಿನ ಅವಿನಾಭಾವ ಸಂಬAಧ , ಸಿಬ್ಬಂದಿಗಳೊಂದಿಗಿನ ಆಪ್ಯಾಯತೆ ಮತ್ತು ಸಾರ್ವಜನಿಕ ಸಂಪರ್ಕ ಉತ್ತಮವಾಗಿರುವುದರಿಂದಲೇ ನಿರ್ಗಮಿತ ಮುಖ್ಯಾಧಿಕಾರಿ ಸಂಗನ ಬಸಯ್ಯ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ಸಲ್ಲುತ್ತಿದೆ. ಅವರದೇ ದಾರಿಯಲ್ಲಿ ನಡೆದು ಅವರು ಉಳಿಸಿಕೊಂಡಿರುವ ಯಲ್ಲಾಪುರ ಪ.ಪಂ ವ್ಯಾಪ್ತಿಯಲ್ಲಿ ಆಗಬೇಕಿರುವ ಯಾವುದಾದರೂ ಕನಸುಗಳಿದ್ದಲ್ಲಿ ನನ್ನ ಹೆಗಲ ಮೇಲೆ ಹೊತ್ತು ಈಡೇರಿಸುವುದಾಗಿ ಭರವಸೆ ನೀಡುತ್ತೇನೆ. ನಿಮ್ಮೆಲ್ಲರ ಸಹಕಾರ ನನಗೂ ಇರಲಿ ಎಂದು ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಸುನಿಲ್ ಸುಭಾಷ್ ಗಾವಡೆ ಸ್ವಾಗತ ಗೌರವ ಸ್ವೀಕರಿಸಿ ಹೇಳಿದರು.





ಉತ್ತಮ ಅಧಿಕಾರಿಯಾಗಿ ಹೆಸರು ಗಳಿಸಿ ಸರ್ಕಾರದ ಆದೇಶದನ್ವಯ ವರ್ಗಾವಣೆಗೊಂಡು ತೆರಳುತ್ತಿರುವ ಕ್ರಿಯಾಶೀಲ ಮುಖ್ಯಾಧಿಕಾರಿ ಸಂಗನಬಸಯ್ಯ ಅವರ ಕಾರ್ಯನಿಷ್ಠೆಯನ್ನು ಕುರಿತು ಪ.ಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಸದಸ್ಯ ಸೋಮೇಶ್ವರ ನಾಯ್ಕ, ಸಾಮಾಜಿಕ ಕಾರ್ಯಕರ್ತ ಮಹ್ಮದ್ ಗೌಸ್, ಪ.ಪಂ ಸಿಬ್ಬಂದಿಗಳಾದ ಹೇಮಾವತಿ ಭಟ್ಟ, ಗುರು ಗಡಗಿ ಮಾತನಾಡಿದರು.
ಸಭೆಯಲ್ಲಿ ಸದಸ್ಯರಾದ ಸತೀಶ್ ಶಿವಾನಂದ ನಾಯ್ಕ,ರಾಧಾಕೃಷ್ಣ ನಾಯ್ಕ್, ರವಿ ಪಾಟಣಕರ, ಅಲಿ, ಕಲ್ಪನಾ ನಾಯ್ಕ, ರಾಜು ನಾಯ್ಕ, ಕಚೇರಿ ಸಿಬ್ಬಂದಿಗಳು, ಪೌರಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದು ಗೌರವಿಸಿ ಸನ್ಮಾನಿಸಿದರು.
Prathidvani Yellapura