
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ಎಂದೇ ಪರಿಗಣಿಸುವ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಕಟ್ಟೆಗೆ ಕವಳ ಉಗಿದು ಅವಮಾನಿಸಿರುವುದನ್ನು ದಲಿತ ಪ್ರಮುಖ ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಉಗ್ರವಾಗಿ ಖಂಡಿಸಿರುವುದಲ್ಲದೆ ಸಂಬಂಧಿಸಿದ ಇಲಾಖೆಗಳು ಕ್ರಮಜರುಗಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಟಿ.ಎಂ.ಎಸ್ ಉಳಿಸಿ ಹೋರಾಟದ ವೇದಿಕೆ ಅಡಿಯಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ವೃತ್ತದ ಮದ್ಯದಲ್ಲಿರುವ ಅಂಬೇಡ್ಕರ್ ಕಟ್ಟೆಗೆ ಕವಳ ತಿಂದು ಉಗುಳಿರುವುದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳಿಗೆ ಅತ್ಯಂತ ಘಾಸಿ ಉಂಟಾಗಿದ್ದು ಈ ಕುರಿತು ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಹಿರಿಯ ದಲಿತ ಮುಖಂಡ ಜಗನ್ನಾಥ ರೇವಣ್ಕರ್ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಯಾವುದೆ ಆಚರಣೆಗಳನ್ನು ಇದೇ ವೃತ್ತದ ಇದೇ ಕಟ್ಟೆಯಮೇಲೆ ನೆರವೇರಿಸುತ್ತಾ ಬಂದಿದ್ದು ಅಂಬೇಡ್ಕರ್ ಅಭಿಮಾನಿಗಳಿಗೆ ಇದೊಂದು ಭಾವನಾತ್ಮಕ ಪವಿತ್ರ ಸ್ಥಳವಾಗಿದೆ. ಇಂತಹ ಸ್ಥಳದಮೇಲೆ ಕವಳ ತಿಂದು ಉಗಿದಿರುವುದು ಖಂಡನಾರ್ಹ.

ಗುರುವಾರ ನಡೆದಿರುವ ಈ ಕೃತ್ಯ ಬೆರೆಲ್ಲಾದರು ನಡೆದಿದ್ದರೆ ಪರಿಸ್ಥಿತಿ ಬೇರೆಯೆ ಆಗಿರುತ್ತಿತ್ತು ಆದರೆ ಶಾಂತಿ ಸೌಹಾರ್ಧತೆಯ ಯಲ್ಲಾಪುರದಂತಹ ಶಾಂತ ಪರಿಸರದಲ್ಲಿ ಸಂಘರ್ಷ ಸಾಧುವಲ್ಲ ತಕ್ಷಣ ಸಂಬಂಧಿಸಿದ ಇಲಾಖೆಗಳು ಜವಾಬ್ದಾರಿ ಹೊತ್ತು ವೃತ್ತ ಶುಚಿಗೊಳಿಸಿ ಹೊರಾಟದ ನೇತೃತ್ವ ವಹಿಸಿದವರ ಮೇಲೆ ಕ್ರಮ ಜರುಗಿಸಬೇಕಿದೆ. ಮುಂದೆ ಇದೇ ಸ್ಥಳದಲ್ಲಿ ಇಂತಹ ಪ್ರತಿಭಟನೆ, ಹೋರಾಟಗಳು ನಡೆಯುವ ಸಂದರ್ಭದಲ್ಲಿ ಅದಕ್ಕಾಗಿ ಪಡೆಯುವ ಅನುಮತಿ ಪತ್ರದಲ್ಲಿ ಇಂತಹ ಕೃತ್ಯಗಳು ಸಂಭವಿಸದಂತೆ ಎಚ್ಚರಿಕೆಯ ನಿರ್ದೇಶನಗಳನ್ನು ನೀಡಬೇಕಿದೆ ಎಂದು ಜಗನ್ನಾಥ ರೇವಣ್ಕರ್ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಗೆ ತಿಳಿಸಿದ್ದಾರೆ.




Prathidvani Yellapura