




ಪ್ರತಿಧ್ವನಿ ಯಲ್ಲಾಪುರ – ರಸ್ತೆ ಬದಿಯಲ್ಲಿ ಮಾಡುವ ತಿಂಡಿ ತಿನಿಸುಗಳ ಮೇಲೆ ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ ಕಣ್ಣಿಟ್ಟು ಅತಿ ಹೆಚ್ಚು ಕೃತಕ ಬಣ್ಣ ಮತ್ತು ವಿಷಕಾರಿ ಟೇಸ್ಟಿಂಗ್ ಪೌಡರ್ ಬಳಸುವುದನ್ನು ಗಮನಿಸಿ ಗೋಭಿ ಮಂಚೂರಿ ಮತ್ತು ಬೊಂಬಾಯಿ ಮಿಠಾಯಿಯನ್ನು ನಿಷೇಧಿಸುವ ಮಾತುಗಳು ಅಲ್ಲಲ್ಲಿ ಕೇಳಿಬಂದಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಲಿದೆ ಎಂಬ ಸತ್ಯ ಅರಿತು ಪುನಃ ಸ್ಪಷ್ಟನೆ ನೀಡಿ ಅಂತಹ ಪದಾರ್ಥಗಳಿಗೆ ಬಳಸುವ ವಿಷಕಾರಿ ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ನಿಷೇಧಿಸಿದ್ದು ಇದರಿಂದ ಆತಂಕಕ್ಕೊಳಗಾಗಿದ್ದ ಗೋಭಿ ಮಂಚೂರಿ ಅಂಗಡಿಕಾರರು ನಿಟ್ಟಸಿರು ಬಿಡುವಂತಾಗಿದೆ.

ಕೊರೊನ ನಂತರ ಬೀದಿ ಬದಿ ವ್ಯಾಪಾರಿಗಳ ಗೋಳು ಹೇಳತೀರದ್ದಾಗಿತ್ತು. ಇತ್ತೀಚಿಗೆ ನಿಧಾನವಾಗಿ ಬದುಕು ಹಳಿಗೆ ಬರುವ ಸಮಯದಲ್ಲಿ ಗೋಬಿ ಮಂಚೂರಿ ಅಂಗಡಿಗಳನ್ನೇ ಬ್ಯಾನ್ ಮಾಡುವ ಮಾತುಗಳು ಬರಸಿಡಿಲಿನಂತೆ ಬಡಿದಿತ್ತು. ಇದರೊಂದಿಗೆ ಹೂಕೋಸು ಮತ್ತು ಎಲೆಕೋಸು ಬೆಳೆಯುವ ರೈತರಿಗೂ ಆತಂಕ ಎದುರಾಗಿತ್ತು.ಆತ್ಮೀಯ


ಇದೀಗ ಸರ್ಕಾರ ಸ್ಪಷ್ಟಪಡಿಸಿದ್ದು ಕಾಟನ್ ಕ್ಯಾಂಡಿಯಲ್ಲಿ ಬಳಸುವ ಕೃತಕ ಬಣ್ಣ ಬ್ಯಾನ್ ಮಾಡಿದ್ದು ಬಣ್ಣ ಬಳಸದ ಕ್ಯಾಂಡಿಗೆ ಯಾವುದೇ ನಿರ್ಬಂಧವಿಲ್ಲ ಹಾಗೆಯೇ ಕೆಮಿಕಲ್ಯುಕ್ತ ಗೋಬಿ ಮಂಚೂರಿಯನ್ನೂ ಬ್ಯಾನ್ ಮಾಡಿದ್ದು ಅದಾವುದನ್ನೂ ಬಳಸದೇ ಮಾಡುವ ಗೋಭಿಗೆ ನಿರ್ಬಂಧವಿಲ್ಲ ಎಂಬುದನ್ನು ಸ್ವತಃ ಆರೋಗ್ಯಮಂತ್ರಿ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಇದೀಗ ಯಲ್ಲಾಪುರ ಪಟ್ಟಣದ ಬೀದಿಬದಿ ಗೋಭಿ ಅಂಗಡಿಕಾರರು ಸರ್ಕಾರದ ನಿರ್ದೇಶನ ಪಾಲಿಸುತ್ತಿದ್ದು ಬಣ್ಣ ಬಳಸದೆ ಟೇಸ್ಟಿಂಗ್ ಪೌಡರ್ ಹಾಕದೆ ಗೋಭಿಮಂಚೂರಿ ಮಾಡಲಾಗುತ್ತಿದೆ. ಕೆಲಸಮಯ ಗ್ರಾಹಕರಿಗೆ ರುಚಿಯಲ್ಲಿ ವ್ಯತ್ಯಾಸ ಕಂಡರು ಆರೋಗ್ಯದ ದೃಷ್ಟಿಯಿಂದ ಇಂತಹ ನಿರ್ಧಾರಕ್ಕೆ ಒಗ್ಗಿಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ ಗ್ರಾಹಕರು.

ಗೋಭಿ ಮಂಚೂರಿಯನ್ನು ಸುಮಾರು 2೦:ವರ್ಷಗಳಿಂದ ರಸ್ತೆಬದಿಯ ಗೂಡಂಗಡಿಯಲ್ಲಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದು ಗೋಭಿ ಮಾಡುವುದನ್ನೇ ಬ್ಯಾನ್ ಮಾಡುತ್ತಾರೆಂಬುದನ್ನು ಕೇಳಿ ಆತಂಕವಾಗಿತ್ತು. ಆದರೆ ಕೆಮಿಕಲ್ ಬಳಕೆಯನ್ನು ಮಾತ್ರ ನಿಷೇಧಿಸಿರುವುದನ್ನು ಕೇಳಿ ಸಂತಸವಾಗಿದೆ. ಆರೋಗ್ಯ ಇಲಾಖೆ , ಆಹಾರ ಇಲಾಖೆ ಕಾಲಕಾಲಕ್ಕೆ ನಮ್ಮ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಂತಹ ವಿಷಕಾರಿ ವಸ್ತುಗಳನ್ನು ಬಳಸುತ್ತಿದ್ದರೆ ಸೀಜ್ ಮಾಡಬಹುದಾಗಿದೆ. ಇದು ಆರೋಗ್ಯದ ವಿಚಾರವಾದ್ದರಿಂದ ಸರ್ಕಾರದ ನಿರ್ಧಾರಕ್ಕೆ ನಮ್ಮ ಸ್ವಾಗತವಿದೆ ಎಂದು ಪಟ್ಟಣದ ಸುಪ್ರಿಯ ಗೋಭಿ ಅಂಗಡಿ ಮಾಲಿಕ ಪ್ರಕಾಶ ಶಂಕರಪ್ಪ ಪೂಜಾರಿ ಮತ್ತು ತಿಲಕ ಗೋಭಿ ಅಂಗಡಿ ಮಾಲಿಕ ಯಲ್ಲಪ್ಪ ಬದ್ದಿ ಕರಾವಳಿ ಮುಂಜಾವಿಗೆ ಪ್ರತಿಕ್ರಿಯಿಸಿದ್ದಾರೆ.



Prathidvani Yellapura