
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ:ಭ್ರಷ್ಟಾಚಾರದಲ್ಲಿ ದೇಶದಲ್ಲೆ ಮೊದಲ ಸ್ಥಾನಕ್ಕೆ ಕರ್ನಾಟಕ ಬಂದಿರುವುದು ಕಾಂಗ್ರೆಸ್ ಸರ್ಕಾರದ ಕೊಡುಗೆ. ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರೆ ಕಾಂಗ್ರೆಸ್ ಆಡಳಿತದ ಬಗ್ಗೆ ಅಸಮದಾನ ವ್ಯಕಪಡಿಸಿರುವುದನ್ನು ಕಾಣಬಹುದು. ಯಲ್ಲಾಪುರ ಕ್ಷೇತ್ರದ ಶಾಸಕರು ಉದ್ಘಾಟಿಸುವ ಪ್ರತಿ ಯೋಜನೆಯು ಬಿಜೆಪಿ ಸರ್ಕಾರದ ಯೋಜನೆಗಳೆ ಆಗಿದೆ. ಮುಂದಿನ ಚುನಾವಣೆಯಲ್ಲಿ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿಯನ್ನೆ ಗೆಲ್ಲಿಸುತ್ತೇವೆ ಅದರಲ್ಲೂ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ನಾನೆ ಖುದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿ ಗೆಲ್ಲಿಸುತ್ತೇನೆ. ರಾಜ್ಯದ ಭ್ರಷ್ಟ ಕಾಂಗ್ರೆಸ್ ತೊಲಗಿಸುವಲ್ಲಿ ಜನಾಕ್ರೋಶ ಯಾತ್ರೆ ಮೂಲವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಅವರು ಪಟ್ಟಣದ ವೈಟಿಎಸ್ಎಸ್ ಶಾಲಾ ಆವರಣದಲ್ಲಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಡಿಯಲ್ಲಿ ಹಮ್ಮಿಕೊಂಡ ” ಜನಾಕ್ರೋಶ ” ಯಾತ್ರೆಯ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ರಾಜ್ಯದಲ್ಲಿ 50 ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಗೆ ಮೀಸಲಿಟ್ಟ 38 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಅನುಷ್ಟಾನಕ್ಕೆ ಬಳಸುವ ದಿಶೆಯಲ್ಲಿ ಭ್ರಷ್ಟಚಾರಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ. ಮುಖ್ಯ ಮಂತ್ರಿಗಳು ಬೆಂಗಳೂರಿಗೆ ಮಾತ್ರ ಸೀಮಿತರಾಗಿದ್ದು ಉತ್ತರ ಕನ್ನಡಕ್ಕೆ ಬಂದೇ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿರುವುದರಿಂದಲೆ ಉತ್ತರ ಕನ್ನಡ ಜಿಲ್ಲೆಯಂತ ಶಾಂತಿಯುತ ಜಿಲ್ಲೆಯಲ್ಲಿ ಭಟ್ಕಳ ದಲ್ಲಿ ಸಾಮಾನ್ಯ ಕಾರ್ಯಕರ್ತನ ಮೇಲೆ ಪೊಲೀಸ್ ಅಟ್ಟಹಾಸ ಮೆರೆದಿರುವುದ ಉದಾಹರಣೆಯಾಗಿದೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಚ್ಚರ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕರ ಅನುದಾನವನ್ನೆ ಇನ್ನೂ ಬಿಡುಗಡೆ ಮಾಡದೆ ಆರ್ಥಿಕ ಅಧಃ ಪಥನದತ್ತ ಸಾಗಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಬದ್ದತೆ ಇದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಮುಂದೆ ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಮುಂದಿನ ಮುಖ್ಯಮಂತ್ರಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರೆ ನಮ್ಮ ಮುಖ್ಯಮಂತ್ರಿಗಳು ಎಂದು ಅಂಕೋಲ – ಕಾರವಾರ ಮಾಜಿ ಶಾಸಕಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಹೇಳಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಜನಾಕ್ರೋಶ ಯಾತ್ರೆ ಸಂಚಾಲಕ ರವಿಕುಮಾರ್, ಭಟ್ಕಳ ಮಾಜಿ ಶಾಸಕ ಸುನಿಲ್ ನಾಯ್ಕ್, ಹಳಿಯಾಳ ಮಾಜಿ ಶಾಸಕ ಸುನಿಲ್ ಕುಮಾರ್ ಹೆಗಡೆ, ಎಸ್.ಎಲ್ ಘೊಟ್ನೇಕರ್, ಮಾಜಿ ಮಂತ್ರಿ ಶಿವಾನಂದ ನಾಯ್ಕ್, ಮಾಜಿ ಶಾಸಕ ನಡಹಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ, ಕೆ.ಜಿ.ನಾಯ್ಕ್ , ಅನಂತಮೂರ್ತಿ ಹೆಗಡೆ,ಎಲ್.ಟಿ.ಪಾಟೀಲ್ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು, ರೇಖಾ ಹೆಗಡೆ ವಂದೇ ಮಾತರಂ ಗೀತೆ ಹಾಡಿದರು, ಪ್ರಶಾಂತ ನಾಯ್ಕ್ ವಂದಿಸಿದರು, ಚಂದ್ರಕಲಾ ಭಟ್ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕು ಮುನ್ನ ಯಲ್ಲಾಪುರದ ಗ್ರಾಮದೇವಿ ದೇವಸ್ತಾನದಲ್ಲಿ ಗ್ರಾಮದೇವಿಯರಿಗೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯವತಿಯಿಂದ ಟ್ರಸ್ಟಿ ರಾಜೇಂದ್ರ ಪ್ರಸಾದ್ ಬಿ.ವೈ.ವಿಜಯೇಂದ್ರ ಮತ್ತು ನಳೀನ್ ಕುಮಾರ್ ಕಟೀಲ್ ಅವರಿಗೆ ಗೌರವ ಸಲ್ಲಿಸಿದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಝಾಂಝ್, ತಮಟೆ, ಡೊಳ್ಳು ಕುಣಿತ ಕಲಾವಿದರುಗಳ ತಂಡದೊಂದಿಗೆ ಸಾವಿರಾರು ಕಾರ್ಯಕರ್ತರೊಂದಿಗೆ ರಾಜ್ಯ ಸರ್ಕಾರದ ಬೆಲೆ ಏರಿಕೆ, ದಲಿತ ವಿರೋದಿ, ಮುಸ್ಲಿಂ ಓಲೈಕೆ ವಿರುದ್ದ ದಿಕ್ಕಾರ ಕೂಗುತ್ತ ಯಾತ್ರೆ ಸಾಗಿತು.

ಯಾತ್ರೆ ಪ್ರಾರಂಭದಿಂದ ವೇಧಿಕೆ ಭಾಷಣ ಮುಗಿಯುವವರೆಗು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಗ್ಗೆ ಅಷ್ಟೇನು ಮಾತನಾಡಲಿಲ್ಲ. ಕಾರ್ಯಕರ್ತರ ನಿರೀಕ್ಷೆಯಂತೆ ಬಹುತೇಕ ಶಾಸಕ ಹೆಬ್ಬಾರ್ ಬಗ್ಗೆ ವಿಜಯೇಂದ್ರ ತೀಕ್ಷ್ಣ ವಾಗಿ ಮಾತನಾಡಬಹುದು ಎಂಬುದಾಗಿತ್ತು ಆದರೆ ವೇದಿಕೆಯಲ್ಲಿ ಒಂದು ಬಾರಿ ನೆನಪಿಸಿಕೊಂಡು ಮುಂದೆ ಚುನಾವಣೆಯಲ್ಲಿ ಸಾಮನ್ಯ ಕಾರ್ಯಕರ್ತನನ್ನೆ ಬಿಜೆಪಿ ಅಭ್ಯರ್ಥಿಯಾಗಿಸಿ ಗೆಲ್ಲುಸುತ್ತೇನೆ ಎಂದರು ಮತ್ತು ಸಮಾದಾನವಾಗದ ಕಾರ್ಯಕರ್ತ ನೋರ್ವ ಸ್ಥಳೀಯ ಶಾಸಕರ ಬಗ್ಗೆ ಮಾತನಾಡಿ ಎಂದು ಕೂಗಿದಾಗ ಮತ್ತೆ ಪುನರುಚ್ಚರಿಸಿದ ವಿಜಯೇಂದ್ರ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡದೆ ನಮ್ಮ ಪಕ್ಷದ ನಿಷ್ಟಾವಂತ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುತ್ತೇನೆ ಎಂದರು.

ಮುಖ್ಯಾಂಶಗಳು
- ಮೋಡಕವಿದ ವಾತಾವರಣವಿದ್ದು ಮಳೆ ಬರದಿರುವುದು ಸಭೆಗೆ ಅನುಕೂಲವಾಯಿತು.
- ಮೂಲಗಳ ಪ್ರಕಾರ 1.500 ಸಾವಿರದಷ್ಟು ಕಾರ್ಯಕರ್ತರು ಸೇರಿದ್ದು ಜಿಲ್ಲೆಯ ಎಲ್ಲಾ ತಾಲೂಕಿನಿಂದ ಆಗಮಿಸಿದ್ದರು.
- ಜಿಲ್ಲೆಯ ಇಬ್ಬರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಸಭೆಗೆ ಬಾರದಿರುವುದು ಆಶ್ಚರ್ಯ ತಂದಿತು.
- ಕುಮಟ ಶಾಸಕ ದಿನಕರ ಶೆಟ್ಟಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗೈರಾಗಿದ್ದರು.
- ಪೊಲೀಸರು ಕಾರಣವಿಲ್ಲದೆ ಸೋಮು ನಾಯ್ಕ್ ಮತ್ತೊರ್ವ ಸದಸ್ಯರ ಹೆಸರು ಹೇಳಿ ಸಮಸ್ಯೆ ಮಾಡುತ್ತಿರುವುದರ ವಿರುದ್ದ ಗುಡುಗಿದರು.
- ದೂರದೂರಿನಿಂದ ಬಂದ ಸಹಸ್ರಾರು ಕಾರ್ಯಕರ್ತರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
- ಶಾಂತಿ ಭಂಗವಾಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
- ಶಿರಸಿ ಡಿವೈಎಸ್ಪಿ ಗಣೇಶ್ ಕೆ.ಎಲ್ ನೇತೃತ್ವದಲ್ಲಿ12 ಮಂದಿ ಪಿ.ಎಸ್.ಐ ಗಳು ಸೇರಿದಂತೆ 120 ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.
ಕಳ್ಳರ ಕೈಚಳಕ
ಮುಂಡಗೋಡು ಬಿಜೆಪಿ ನಾಯಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ ಪಾಟೀಲ್ ಕಿಸೆಯಲಿದ್ದ ಯಾತ್ರೆಗೆ ಜನರನ್ನು ಕರೆ ತಂದ ವಾಹನಗಳಿಗೆ ಕೊಡಬೇಕಾದ ಹಣವನ್ನು ಯಾತ್ರೆಯ ಜಂಜಾಟದಲ್ಲಿ ಲಪಟಾಯಿಸಿದ್ದಾಗಿ ತಿಳಿದುಬಂದಿದೆ.




Prathidvani Yellapura