

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಮಹಿಳಾ ಸಬಲಿಕರಣ ಮತ್ತು ಆರ್ಥಿಕ ಉನ್ನತಿಗೆ ಉಚಿತ ಪ್ರಯಾಣದ ಯೋಜನೆ ಸಹಕಾರಿಯಾಗಲಿದೆ. ಯಾವುದೆ ಸರ್ಕಾರಗಳು ಜನಹಿತಕ್ಕಾಗಿ ಜಾರಿಗೆ ತರುವ ಯೋಜನೆಯಲ್ಲಿ ಪಕ್ಷಬೇಧ ತೋರದೆ ಪ್ರೊತ್ಸಾಹಿಸಬೇಕಿದೆ. ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ಅಭ್ಯುದಯಕ್ಕೆ ಅನುವಾಗಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ” ಶಕ್ತಿ ” ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರದ ಅಧೀನದಲ್ಲಿರುವ ರಸ್ತೆ ಸಾರಿಗೆ ಸಂಸ್ಥೆಯೂ ಸೇರಿದಂತೆ ಎಲ್ಲ ನಿಗಮಗಳೂ ಹತ್ತಾರು ಬಗೆಯ ಸಂಕಷ್ಟದಲ್ಲಿದ್ದರೂ ಸಾರ್ವಜನಿಕರ ಮುಖ್ಯವಾಗಿ ಬಡವರ ಅನುಕೂಲಕ್ಕಾಗಿ ಸರ್ಕಾರ ಎಲ್ಲಾ ಯೋಜನೆಗಳನ್ನೂ ಸ್ಥಗಿತಗೊಳಿಸದೇ ಮುನ್ನೆಡೆಸಿದೆ. ಇದೀಗ ಇಂದಿನಿಂದ ಜಾರಿಗೊಂಡಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಕ್ಷಾತೀತ ಭಾವನೆಯೊಂದಿಗೆ ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಯೋಜನೆಯ ಯಶಸ್ಸಿಗೆ ಕಾರಣರಾಗಬೇಕಿದೆ ಎಂದರು.

ಪ್ರತಿ ಪಕ್ಷಗಳ ಅನುಮಾನಕ್ಕೆ ತೆರೆ ಬಿದ್ದಿದೆ, ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ದೊರೆತಿದೆ. ಕೊಟ್ಟಿರುವ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಕಂಕಣ ಬದ್ದವಾಗಿದ್ದು ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.

ಉಚಿತ ಬಸ್ ಪ್ರಯಾಣಕ್ಕೆ ಯಲ್ಲಾಪುರ-ಹುಬ್ಬಳ್ಳಿ ಬಸ್ಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದ ಶಾಸಕ ಹೆಬ್ಬಾರ್ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಹೂವಿನೊಂದಿಗೆ ಶೂನ್ಯದರದ ಟಿಕೆಟ್ ನೀಡಿ ಶುಭಕೋರಿದರು

ತಹಶಿಲ್ದಾರ ಗುರುರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದದಾಸ್, ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ, ಪಕ್ಷದ ಪ್ರಮುಖರಾದ ವಿ.ಎಸ್.ಭಟ್, ಎಂ.ಜಿ.ಭಟ್, ಎನ್.ಕೆ.ಭಟ್ , ದಿಲಿಪ್ ರೋಖಡೆ , ಪ್ರಶಾಂತ್ ಸಭಾಹಿತ್, ಪ.ಪಂ ಸದಸ್ಯ ಕೈಸರ್, ನರ್ಮದಾ ನಾಯ್ಕ, ಉಲ್ಲಾಸ ಶಾನಭಾಗ, ಅನಿಲ್ ನಾಯ್ಕ ಉಪಸ್ಥಿತರಿದ್ದರು.

ವೈ.ಟಿ.ಎಸ್.ಎಸ್ ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಾ.ಕ.ರಾ.ರ.ಸಾ. ಸಂಸ್ಥೆಯ ಶಿರಸಿಯ ಸಹಾಯಕ ಉಗ್ರಾಣಾಧಿಕಾರಿ ಚಂದ್ರಶೇಖರ ಟಿ.ಎಂ ಸ್ವಾಗತಿಸಿದರು, ಡಿಪೋ ಮ್ಯಾನೇಜರ್ ಸಂತೋಷ್ ವರ್ಣೆಕರ್ ಪ್ರಾಸ್ತಾವಿಕ ನುಡಿದರು. ಪ್ರಗತಿ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು. ಬಿಜೆಪಿ ಪ್ರಮುಖರು, ಕಾರ್ಯಕರ್ತರು ಸಂಸ್ಥೆಯ ಸಿಬ್ಬಂದಿಗಳು. ಸಾರ್ವಜನಿಕರು ಉಪಸ್ಥಿತರಿದ್ದರು.





Prathidvani Yellapura